Home / ಕವನ / ಕವಿತೆ / ಡಂಬಳ ಮಲ್ಲವ್ವ

ಡಂಬಳ ಮಲ್ಲವ್ವ

ಸುಡಲಿ ಹೆಣ್ಣಿನ ಜಲುಮ |
ಹೆರವರ ಕೈಯಲಿ ಸಣ್ಣ ||ಪ||

ಹಡದವ್ವ ಹಡದಪ್ಪ, ಹಡದೇನು ಸುಡಬೇಕ
ಹಡೆದು ಹೆರವರಿಗೆ ಕೊಡಬೇಕ | ಸು | ಕಣ್ಣೀರು
ತಡೆದ ಮಳೆಯಾಗಿ ಸುರಿದಾವ || ೧

ಬೀಸಿ ಹಾಡುನ ಬಾರ, ಕಾಸು ಜಿಪುಣನ ಹಾಡ-
ಗಾಸ್ಯಾಕ ಬಾಳು ಜನುಮಕ | ಜಗದಾಗ
ಸೋಸಿ ನೆಡದಾರ ಸಂಸಾರ || ೨

ಪುಲಿಕೇಶಿ ದೊರೆಯಾಳಿ, ಕಲಕೆಲ್ಲ ತಿಳಿಯಾಗಿ
ಬಲಕಾಣಕೇಳೊ ದೊಡಬಸವ | ಡಂಬಳದ
ಕಳಸಾದ ತೇರ ಎಳೆದಾವ || ೩

ಹಿಡಿ ಹೊನ್ನು ಹನಿರಗುತ, ಎಡೆಕೆರೆಗೆ ಮಲ್ಲಮ್ಮ
ದೊಡಬಸವ ಸಾವ ಕರಕೊಂಡ | ಮಗರಾಮ
ಕಡೆಗಾದ ಕೆರೆಗೆ ಆಹುತಿಯ || ೪

ಕಾಸು ಕಾಸಿಗೆ ಜೀನ, ರಾಸಿ ಗಳಿಸಿದ ಹೊನ್ನು
ಆಸೆ ಉಣಲಿಲ್ಲ ಒಡಲೂಟ | ದೊಡ ಬಸವ
ವಾಸೆ ಬಡವರಿಗೆ ಡಂಬಳಕ || ೫

ಗುಣವಂತಿ ಮಲ್ಲಮ್ಮ, ಹಣವಂತ ಜಿಪುಣಾಗ
ಪುಣವಂತಿ ಮಡವಿ ಮನಿಯಾಗ | ದಯವಂತಿ
ತನುವಂತಿ ಡಂಬಳದ ಬಡಜನಕ || ೬

ಹೊಟ್ಟಿಗಿ ಉಣಲಿಲ್ಲ, ಬಟ್ಟಿ ಮೈಗುಡಲಿಲ್ಲ
ಕಟ್ಟಿನಾಗಿಟ್ಟ ಮನಿಯಾಗ | ಸಂಸಾರ
ದಿಟ್ಟ ಹುಟ್ಟ್ಯಾನ ಮಗರಾಯ || ೭

ಮಗಹುಟ್ಟಿ ಹದಿನಾರು, ಮುಗದೊಮ್ಮೆ ಬರಬಂತು
ಸಿಗಲಿಲ್ಲ ಜನಕ ಹಿಡಿಜೋಳ | ದೊಡಬಸವ
ಹಗೆ ತುಂಬಿ ಕಣಜ ಏರಿಸಿದ || ೮

ಬಂತು ಬೀಸುತ ಬರವು, ಎಂತು ಜನ ಗೋಳಾತೊ
ಕಂತು ಹರಕಾಯೊ ಜನವೆದ್ದು | ಡಂಬಳದ
ನಿಂತು ನಿಂತಲ್ಲೆ ಕೈಮುಗಿದು || ೯

ಬರದಾಗ ಕೆರೆಕಡಿಸೊ, ವರಶೆಟ್ಟಿ ದೂಡಬಸವ
ಹರನಿನಗ ಮೆಚ್ಚಿ ಮರತಾನೊ | ಲಕ್ಕಸಮಿ
ಸರದೀಪ ಹಚ್ಚೊ ಬಡವರಿಗೆ || ೧೦

ಕೆರೆ ಬತ್ತಿ ಡಂಬಳದ, ದೊರೆ ಕೇಳಿ ಬಾದಾಮಿ
ಮರಗ್ಯಾನ ಕರುಣಿ ಪುಲಕೇಶಿ | ಸಾರ್ಯಾನ
ತೆರಗಿ ಜನದಾಗ ಕಡತವೊ || ೧೧

ಗೋಳು ಕೇಳಿದ ಅರಸ, ಕಾಳ ಸಾರಿಗೆ ಹೇರಿ
ಕಳಿಸ್ಯಾನ ಜನಕ ದೊಡ ಬಸವ | ಡಬಳದ
ಗಳಿಸ್ಯಾನ ಜನದ ರಗತ್ಹಿಂಡಿ || ೧೨

ಕೇಳಿ ಕೊರಗಿತು ಮಂದಿ, ಗೋಳಿಟ್ಟು ಬೋರಾಡಿ
ಜೋಳ ಜೋಳೆಂದು ಮನಿಮುಂದ | ನೀಗ್ಯಾರ
ನಾಳೆ ನಾಳೆಂದ ದೊಡಬಸವ || ೧೩

ತಲೆಗಿಂಬಿಗ್ಹೊನ್ನಿಟ್ಟು, ಮಲಗಿ ಮಡಿಯಿತು ಮಂದಿ
ಕುಲಗೇಡಿ ಹೊನ್ನ ಕೂಡಿಸಿದ | ದೊಡಬಸವ
ತಳಮಳಿಸಿ ಮಡದಿ ಮನಿಯಾಗ || ೧೪

ಸಾವಜೀವಕ ಹಾಕೊ, ತ್ಯಾವೆಂದು ಹನಿನೀರ
ಸಾವುಕಾರೆಂದು ಜನ ಬಂತು | ಪತಿದೇವ
ಕಾಯೊ ಉಣನೀಡಿ ಕೈಮುಗಿವೆ || ೧೫

ಕರಗಾಲ ಊರ್ಹೊಕ್ಕಿ, ಎರವಾತ ಮಳೆಬೆಳೆಯು
ಬರಗಾಲ ಬಂತ ಡಂಬಳಕ | ಎಲೆ ಹೆಣ್ಣ
ತರವಲ್ಲ ನಿನ್ನ ಒಡಬಾಳ || ೧೬

ಕುಡಿದೆನೆಂದರ ಗಂಜಿ, ಒಡಕು ಕಾಸೆನಗಿಲ್ಲ
ಬಡವರಿಗೆ ಕೊಟ್ಟು ಸಲುವಾಕ | ತವರೂರ
ಒಡವೆಲ್ಲ ನಿಮ್ಮ ತಾಬಾಕ || ೧೭

ವಜ್ಜರುಂಗರ ತಾರ, ಹೆಜ್ಜಿ ಮೀರ್ಯಾವ ಮಾತ
ದರ್ಜೆನಂದ್ಹೋತ ಗಂಡಾಗಿ | ಎಲೆ ಹೆಣ್ಣ
ಲಜ್ಜೆ ನಿನಗಿಲ್ಲ ನುಡಿಲಾಕ || ೧೮

ತವರೂರ ಉಂಗುರಕ, ನೆವ ಏನ ಅಧಿಕಾರ
ಶಿವಶಿವನ ತಾಯಿ ಕೊಟ್ಟಾಳ | ಉಂಗುರದ
ಬವಣಿ ಬಿಡಲಿಲ್ಲ ಕಡೆತನಕ || ೧೯

ಸಾಕು ಸುಡಲೀ ಬಾಳ, ಯಾಕಮಾಡಿದಿ ಶಿವನ
ನಾಕ ಮಂದ್ಯಾಗ ಹೌದೆನಿಸಿ | ನಡೆದಾರ
ಜೀಕ ಕೈಲಾಸ ತೂಗೂದ || ೨೦

ಬಟ್ಟಿಗುಂಗರವಿಡಲು, ಇಟ್ಟವರ ನುಂಗೂದ
ಕೊಟ್ಟ ಹಡದವ್ನ ಕಿವಿಮಾತ | ನೆನಪಾಗಿ
ದಿಟ್ಟಿ ಮಲ್ಲಮ್ಮ ಕೈಗಿಟ್ಟ || ೨೧

ಬಳಿಗೆ ಬಾ ಮಗರಾಯ, ತಿಳಿಮಾತ ಕಿವಿಗಿಡುವೆ
ಮುಳಗಿದರ ಹೋತ ಈ ಜಲುಮ | ಡಂಬಳದ
ಕೆರೆ ಕಡಿಸು ಭಾರ ನಿನಮ್ಯಾಲೆ || ೨೨

ಹೊತ್ತಿಗಾಗದ ಜೀವ, ಸತ್ತ ಹೆಣ ಜಗದಾಗ
ಉತ್ತಮರ ಮಾತ ನಡಿಯಾವ | ಬಡಜನಕ
ಕುತ್ತು ಬಂದಾಗ ಉಣನೀಡ || ೨೩

ಮಲಗ್ಯಾಳ ಮಲ್ಲಮ್ಮ, ಬಲಗೈಯಾಗುಂಗೂರ
ಬೆಳಗಾಗಿ ಕಂಡ ದೊಡ ಬಸವ | ಇಟಗೊಂಡ
ಚಣಕ ಕರಕೊಂಡ ದುರುಮರಣ || ೨೪

ಹಡದವ್ವ ಹಡದಪ್ಪ, ಎಡಬಲಕ ಮಲಗ್ಯಾರ
ಬಡಕೊಂಡು ರಾಯ ಆಹುತಿಯ | ಕೆರೆಗಾದ
ಡಂಬಳದ ಸುದ್ದಿ ಹರಿದಾವ || ೨೫

ವಜ್ಜರುಂಗರ ಮುರಿಸಿ, ಜನ ಕೂಡಿ ಗುಡಿ ಕಟ್ಟಿ
ತೇರ ಎಳಿದಾರ ದೊಡಬಸವ | ಡಂಬಳದ
ಗರತಿ ಮಲ್ಲವ್ವ ತೆರಿ ಏರಿ || ೨೬

ಪುಲಕೇಶಿ ದೊರೆಯಾಳಿ, ಕಲಕೆಲ್ಲ ತಿಳಿಯಾಗಿ
ಬಲಕಾಣ ಕೇಳೊ ದೊಡಬಸವ | ಡಂಬಳದ
ಕಳಸಾದ ತೇರ ಎಳಿದಾವ || ೨೭
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...