Home / ಕವನ / ಕವಿತೆ / ಢಣ್….ಢಣಾ….ಢಣ್….

ಢಣ್….ಢಣಾ….ಢಣ್….

ಢಣ್ ….ಢಣಾ….ಢಣ್..
ಗಡಿಯಾರದಲ್ಲಿ ಗಂಟೆ ಹೊಡೆಯುತ್ತಿದೆ ಎಂಟು
ನನಗು ಅದಕೂ ಇಹುದು ನಿತ್ಯ ಗಂಟು;
ದೇಹದಲ್ಲಿ ಆಲಸಿಕೆ
ಮನಸಿನಲಿ ಬೇಸರಿಕೆ
ಕಣ್ಣಿನಲಿ ತೂಗುತಿದೆ ಇನ್ನೂನು ತೂಕಡಿಕೆ
ಏಳಲಾರದ ಮನಸು
ಹಾಸಿಗೆಯ ಬಿಟ್ಟು –
ಪಾಪ! ನೆರೆಮನೆಯಲಳುತಿದೆ ಕೂಸು
ಕಿಟಕಿಟಿಯ ಕೊಟ್ಟು!
ಎದ್ದು ಹಾಸಿಗೆ ಮಡಿಸಿ
ಕಸಗುಡಿಸಿ
ಕನ್ನಡಿಗೆ ಎದುರಾಗಿ ನಿಂತು ತಲೆಗೂದಲಲಿ
ಬೆರಳಿರಿಸಿ-
ನನ್ನ ನಾನೇ ಕಂಡು
ಹೂ ನಗೆಯ ಸವಿಯುಂಡು ಅಂತೆ ನಿಂತೆ
ಎದೆಯ ಆಗಸದಲ್ಲಿ
ಮುಗಿಲು ಮುಗಿಲಿಗೆ ತಾಕಿ ಗಗನವೇ ಹರಿವಂತೆ
ಹೊಳೆಯಿತದೊ ಕೋಲ್-ಮಿಂಚು!
ಇದ್ದುದಿರುವಂತೆಯೇ-
ನಿಂತ ನೆಲ, ಮೇಜು ಕುರ್ಚಿ ಟಿಪಾಯಿ ಸೆಲ್ರು
ಅಟ್ಟಹಾಸದ ಕುಣಿತ!
ಮೈ ಕೈಯ ಮಣಿತ.
ಕತ್ತಲೆಯ ಕೋಣೆಯಲಿ
ಮೂಕವಾಗಿಯೆ ಯಾರೊ ಮೇಲ್ವಾಯ್ದು ಬಿದ್ದಂತೆ
ಬಿಡಿಸಿಕೊಳ್ಳುವ ಮುನ್ನ ಯಾರಿಲ್ಲವೆಂಬಂತೆ
ಮನಕೆ ಕವಿಯಿತು ಮಂಕು
ಅಣಕು ಮಿಣುಕು.
ಹೊರಳ ನೋಡಿದೆ ಮತ್ತೆ ಕೋಣೆ ತುಂಬ
ಹರಿದು ಹೋಯಿತು ಸುತ್ತು ಕಣ್ಣ ಬಿಂಬ
ಹ್ಯಾಂಗರಿಗೆ ತೂಗುತಿವೆ ಕೋಟು ಪ್ಯಾಂಟು
ಇತ್ತ ಒಂದೆರಡು ಶರ್ಟು
ಮೇಜು ಶೆಲ್ಫು ಕಪಾಟಿನಲಿ ಪುಸ್ತಕದ ರಾಶಿ
ಸೌಭಾಗ್ಯದಾ ನನ್ನ ಜೀವಕಾಶಿ
ಸರ್ವಸ್ವಕೂ ನನಗೆ ಇದುವೆ ಆಸ್ತಿ
ಮತ್ತೆ ತಲೆಯೊಳಿದೆ ಈ-ಇದಕು ಜಾಸ್ತಿ.
ಏನಿದೆ ಈ ಹೃದಯ ಸಮ
ಉಳಿದೆಲ್ಲವು ಬಿಸಿಲ ಹಿಮ
ಕರೆಯುತಿದೆ ಕರ್ತವ್ಯ ಕೈಯ ಬೀಸಿ
ಉಸಿರು ಉಸುರಿಗು ತನ್ನ ನೆನಪು ಸೂಸಿ
ದಾರಿಯುದ್ದಕು-ಬರಿಯ ಧೂಳೆ ಧೂಳು
ಬಸ್ಸು ಬಂದರೆ ಬಟ್ಟೆ ಎಲ್ಲ ಹಾಳು!
ಢಣ್….ಢಣಾ….ಢಣ್….
ಸಿಪಾಯಿ ಹೊಡೆದನೊ ಗಂಟೆ
ನಿತ್ಯದಂತೆ
ಇದೆ ನೋಡು ಹಾಯ್-ಸ್ಕೂಲು
ನಾ ಮೇಷ್ಟ್ರು
ತಾಸು ತಾಸಿಗು ಗಂಟೆ ಹೊಡೆವರಂತೆ
ಅದಕಾದರೂನು ಬಿಡುವಿಲ್ಲವಂತೆ!
ಉಳಿದವರ ಜೊತೆಗೂಡಿ
ಗಾಣದೆತ್ತಿನ ಜೋಡಿ
ಕ್ಲಾಸು ಕ್ಲಾಸಿಗು ಸುತ್ತಿ ಹೋಗಬೇಕು
ಆ ವಿಷಯ ಈ ವಿಷಯ ಯಾವುದಾದರು ಏನು?
ಬರುತಿರಲಿ ಬರದಿರಲಿ ಕಲಿಸಬೇಕು.
ಕಲಿಸದಿದ್ದರೆ ಹೇಗೆ ಸಾಗಬೇಕು!
ತಲೆ ಹಾರಿ ಹೋದಂತೆ ಜೀವ ಮೌನ
ಸೋತ ನರನಾಡಿಗಳು ನಿಜಕು ಊನ
ಸ್ಟಾಫ್ ರೂಮಿನಲಿ ಕಪ್ಪು ಬಸಿಯ ಗಾನ
ಹೀರುವರು ಮೇಷ್ಟ್ರುಗಳು ಚಹದ ಜೇನ!
ಗಾಳಿಯಲೆಯಲೆಯಲ್ಲಿ ಸಿಗರೇಟ ಧೂಮ
ಅವರಿವರ ನೇಮ!
ಅಲ್ಲಲ್ಲಿ ಕುಳಿತಲ್ಲಿ
ಮೂಲೆ ಮೂಲೆಗಳಲ್ಲಿ
ಕೊರೆದ ಕಡ್ಡಿಗಳೊಡನೆ ಸಿಗರೇಟ ತುಂಡುಗಳು
ಸುಟ್ಟ ಮೋರೆಯ ತೋರಿ ಬಿದ್ದಿರುವವು;
ತಂಬಾಕು ತಿಂದವರ ಕೆಂಜೊಲ್ಲ ಪಿಚಕಾರಿ
ನೊಣಕೆ ಔತಣವನ್ನು ನೀಡಿರುವವು!
ಇರುವ ಶಕ್ತಿಯನೆಲ್ಲ ಹಿಡಿದು ನಿಲಿಸು
ಹುಡುಗರೊಡಗೂಡುತಲಿ ಮತ್ತೆ ಬೆರೆಸು
“ತಿನಬೇಕು ಹಾಕಿದಷ್ಟು
ಹೊರಬೇಕು ಹೇರಿದಷ್ಟು”
ಎನ್ನುವದೆ ಈ ಬಾಳ ಹಾಳಾದ ನೀತಿ
ಹೊಲಸು ಪಿಶಾಚಿ.
………………………….
ಸಿಪಾಯಿ ಹೊಡೆದನೊ ನಿಂತು ಕೊನೆಯ ಗಂಟೆ
ದೇವರಂತೆ!
ಢಣ್….ಢಣಾ….ಢಣ್….
*****
Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...