Home / ಕವನ / ಅನುವಾದ / ಇಂಗ್ಲೆಂಡ ನಾವಿಕರು

ಇಂಗ್ಲೆಂಡ ನಾವಿಕರು

ಇಂಗ್ಲೆಂಡ ನಾವಿಕರಿರಾ – ಕಾಯುವಿರಿ
ನೀವೆಮ್ಮ ಕಡಲುಗಳನು;
ನಿಮ್ಮ ಬಾವುಟ ತಡೆಯಿತೊಂದು ಸಾವಿರ ವರುಷ
ಗಾಳಿಯನು ಕಾಳಗವನು.
ನಿನ್ನೊಮ್ಮೆ ನಿಮ್ಮ ವಿಜಯಧ್ವಜವ ತೂಗಿಬಿಡಿ
ಇನ್ನೊಬ್ಬ ಹಗೆಯ ತಾಗಿ
ಕಡಲಲ್ಲಿ ನಡೆಗೊಳ್ಳಿ-
ಬಿರುಗಾಳಿ ತೀಡುತಿರಲು
ಹಿರಿದಾಗಿ ಕಾಳಗವು ಬೊಬ್ಬಿರಿದು ಹಬ್ಬಿರಲು
ಬಿರುಗಾಳಿ ತೀಡುತಿರಲು.
ನಿಮ್ಮ ಪಿತೃಗಳು ಧೀರರು – ತೆರೆತೆರೆಗೆ
ಹೊಮ್ಮುವರು ಹುರಿಗೊಳಿಸಲು;
ಹಡಗಿನೆಟ್ಟವೆ ಅವರು ಕಾದಿ ಹೆಸರಾದ ಕಣ,
ಕಡಲ ಸುಳಿ ಹೂಳಿದ ಕುಳಿ.
ಎಲ್ಲಿ ಬ್ಲೇಕ್ ನೆಲ್ಸನರು ಚೆಲ್ಲಿ ನೆತ್ತರ ಕೆಡೆದ
ರಲ್ಲಿ ನಿಮಗೆದೆ ಕನಲದೆ,
ಕಡಲಲ್ಲಿ ನಡೆವಲ್ಲಿ?-
ಬಿರುಗಾಳಿ ತೀಡುತಿರಲು,
ಹಿರಿದಾಗಿ ಕಾಳಗವು ಬೊಬ್ಬಿರಿದು ಹಬ್ಬಿರಲು,
ಬಿರುಗಾಳಿ ತೀಡುತಿರಲು.
ಕೋಟೆಗಳು ಕೊತ್ತಳಗಳು-ಬೇಡದೆ ಬ್ರಿ
ಟಾನಿಯಳು ಹದುಳವಿಹಳು;
ಬೆಟ್ಟದೆರೆಗಳ ತಲೆಯ ಮೆಟ್ಟುವಳು ದಾಳಿಯಲಿ.
ಕಡಲು ಮನೆಯಾಗಿರುವಳು
ಗುಡುಗಿ ತನ್ನಡವಿಗಳ ತೇಗುಮರದೊಡಲಿಂದ,
ಅಡಗಿಸುವಳಡಿಯ ಹೊನಲ
ಕರೆಯಲ್ಲಿ ಮೊರೆವಲ್ಲಿ-
ಬಿರುಗಾಳಿ ತೀಡುತಿರಲು,
ಹಿರಿದಾಗಿ ಕಾಳಗವು ಬೊಬ್ಬಿರಿದು ಹಬ್ಬಿರಲು,
ಬಿರುಗಾಳಿ ತೀಡುತಿರಲು.
ಇಂಗ್ಲೆಂಡ ಧ್ವಜಪಟವದು – ರೌದ್ರದಲಿ
ಧೂಮಕೇತುವೊಲುರಿವುದು;
ಬಿಗಿದ ಭೀತಿಯ ನಿಶಿಯ ಕಾರೊಡ್ಡು ಕರಗುತ್ತ
ನಗುವನಕ ಶಾಂತಿಯರಿಲು.
ಆಗ ಆಗುತ್ಸವದಿ, ಸಾಗರದ ವೀರರಿರ,
ಬೀಗುವೆವು, ಕೀರ್ತಿಸುವೆವು
ನಿಮ್ಮಗಳ ಹಮ್ಮುಗಳ-
ಬಿರುಗಾಳಿ ತೀಡಿ ನಿಲಲು,
ಘೋರಕದನದ ಬೊಬ್ಬೆ ತೂರಿ ಮೊರೆವುದು ನಿಲಲು,
ಬಿರುಗಾಳಿ ತೀಡಿ ನಿಲಲು.
*****
CAMPBELL (1777 – 1844) : Ye Mariners of England
Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...