Home / ಕವನ / ಕವಿತೆ / ಉನ್ಮಾದಿನಿ

ಉನ್ಮಾದಿನಿ

ವಸಂತ


ಬಂದೆ ಬರುವನಂತೆ ಆತ
ಬಂದೆ ಬರುವನಂತೆ !
ಚೆಂದದೊಸಗೆಯನ್ನು ಕೇಳಿ
ನವಿರ ಹೊರೆಯನಾಂತೆ !

ನಿಂದೆ ಮರುಳೆಯಂತೆ….
ನಿಂದೆ ಮರುಳೆಯಂತೆ, ನೆರೆಯೆ
ಮೈಮರೆವಿನ ಸಂತೆ.


ಇನಿಯ ಬರುವ ಮೊದಲೆ ನನ್ನ
ಮನೆಯನೆಂತು ಮಿನುಗಿಸುವೆ?
ಮನಸು ಮೆಚ್ಚಿ ತಕ್ಕಿಪಂತೆ
ತನುವನೆಂತು ತೊಳಗಿಸುವೆ?

ಬರಲು ನಿಲುವೆನೆಂತು….?
ಬರಲು ನಿಲುವೆನೆಂತು? ಅವನ
ಕರೆದು ನುಡಿವೆನೆಂತು?


ಆತನನೆಂತಾದರಿಸಲಿ?
ಆಸನವಾವುದನಿರಿಸಲಿ?
ಪ್ರೀತಿ ಯಾವ ರಸದೊಳೇನೊ!
ಪಾಕವನಾವುದ ತರಿಸಲಿ?

ತಿಳಿಯಲೊಲ್ಲದೊಂದು….!
ತಿಳಿಯಲೊಲ್ಲದೊಂದು, ಅವನ
ತಣಿಸುವ ತೆರನಿಂದು!


ತಣಿಸುವ ತೆರನೊಂದರಿಯದೆ,
ತಿಳಿದ ಜನರೊಳಾರಯ್ಯದೆ,
ಇನಿಯನ ನೋಡಲಿಕ್ಕೆ ಬರಿದೆ
ಹಲುಬಿದೆ; ಬಲು ಹುಚ್ಚಿಯಾದೆ;

ನೋಡುವೆನವನನ್ನು ….!
ನೋಡುವೆನವನನ್ನು, ಆಗ
ಮಾಡಲಿ ನಾನೇನು?


ಮಾಡದಲಾವಾವುದನೂ
ಮೋಡಿವಡೆದ ತೆರದಿ ನಾನು
ನೋಡುತಲಾತನನೆ ನಿಂತು,
ಬೇಡಿಕೊಳುವೆ ನಯದೊಳಿಂತು:

“ನೋಡು ಒರೆಗೆ ಹಚ್ಚಿ….!
“ನೋಡು ಒರೆಗೆ ಹಚ್ಚಿ, ದೊರೆಯೆ
ನಾನಿರುವೆನು ಹುಚ್ಚಿ!”


“ನಿನ್ನ ಕಾಂಬ ಉನ್ಮಾದದಿ
ಇನ್ನಾವುದನರಿಯದವಳು,
“ನಾಣು ಜಾಣು ರೀತಿ ನೀತಿ
ಮಾನಾದರ ಕಾಣದವಳು,

“ನೀನೆ ಹೇಳು ನಲ್ಲಾ….!
“ನೀನೆ ಹೇಳು ನಲ್ಲ, ಮಾಡ-
ಲೇನು ನಾನದೆಲ್ಲಾ!”


ಬಿನ್ನವಿಸಲು ನನ್ನಿ ಕತೆ
ಉನ್ಮಾದಿನಿಯಿವಳೆನ್ನುತೆ
ಚೆನ್ನ ಮರಳಿ ತೆರಳುವನೇ-
ನನ್ನೊಳು ಕೀಳ್‌ಗಣ್ಣಿರಿಸುತೆ ?
ಅಹುದೆ ತೆರಳಬಹುದೇ…?
ಅಹುದೆ ತೆರಳಬಹುದೆ ? ಅವಗೆ
ನನ್ನಿರವಿದು ಅರಿದೇ ?


ನನ್ನಿರವಿದು ತಿಳಿಯದೇನು ?
ಮನ್ನೆಯನವ ಮರುಳನೇನು ?
ನನ್ನಿ ಯು ತನಗಾಗಿ ಈಕೆ
ಉನ್ಮಾದಿನಿಯಾದಳೆನುತೆ

ಕರೆವ ಕರುಣೆಯಿಂದೆ….
ಕರೆವ ಕರುಣೆಯಿಂದೆ, ನನ್ನ –
ನಿರಿಸಿಕೊಳುವ ಮುಂದೆ.
ಇರಿಸಿಕೊಳುವ ಮುಂದೆ, ಒಡನೆ
ಬೆರೆವ ನಲುಮೆಯಿಂದೆ.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...