Home / ಕವನ / ಕವಿತೆ / ಉನ್ಮಾದಿನಿ

ಉನ್ಮಾದಿನಿ

ವಸಂತ


ಬಂದೆ ಬರುವನಂತೆ ಆತ
ಬಂದೆ ಬರುವನಂತೆ !
ಚೆಂದದೊಸಗೆಯನ್ನು ಕೇಳಿ
ನವಿರ ಹೊರೆಯನಾಂತೆ !

ನಿಂದೆ ಮರುಳೆಯಂತೆ….
ನಿಂದೆ ಮರುಳೆಯಂತೆ, ನೆರೆಯೆ
ಮೈಮರೆವಿನ ಸಂತೆ.


ಇನಿಯ ಬರುವ ಮೊದಲೆ ನನ್ನ
ಮನೆಯನೆಂತು ಮಿನುಗಿಸುವೆ?
ಮನಸು ಮೆಚ್ಚಿ ತಕ್ಕಿಪಂತೆ
ತನುವನೆಂತು ತೊಳಗಿಸುವೆ?

ಬರಲು ನಿಲುವೆನೆಂತು….?
ಬರಲು ನಿಲುವೆನೆಂತು? ಅವನ
ಕರೆದು ನುಡಿವೆನೆಂತು?


ಆತನನೆಂತಾದರಿಸಲಿ?
ಆಸನವಾವುದನಿರಿಸಲಿ?
ಪ್ರೀತಿ ಯಾವ ರಸದೊಳೇನೊ!
ಪಾಕವನಾವುದ ತರಿಸಲಿ?

ತಿಳಿಯಲೊಲ್ಲದೊಂದು….!
ತಿಳಿಯಲೊಲ್ಲದೊಂದು, ಅವನ
ತಣಿಸುವ ತೆರನಿಂದು!


ತಣಿಸುವ ತೆರನೊಂದರಿಯದೆ,
ತಿಳಿದ ಜನರೊಳಾರಯ್ಯದೆ,
ಇನಿಯನ ನೋಡಲಿಕ್ಕೆ ಬರಿದೆ
ಹಲುಬಿದೆ; ಬಲು ಹುಚ್ಚಿಯಾದೆ;

ನೋಡುವೆನವನನ್ನು ….!
ನೋಡುವೆನವನನ್ನು, ಆಗ
ಮಾಡಲಿ ನಾನೇನು?


ಮಾಡದಲಾವಾವುದನೂ
ಮೋಡಿವಡೆದ ತೆರದಿ ನಾನು
ನೋಡುತಲಾತನನೆ ನಿಂತು,
ಬೇಡಿಕೊಳುವೆ ನಯದೊಳಿಂತು:

“ನೋಡು ಒರೆಗೆ ಹಚ್ಚಿ….!
“ನೋಡು ಒರೆಗೆ ಹಚ್ಚಿ, ದೊರೆಯೆ
ನಾನಿರುವೆನು ಹುಚ್ಚಿ!”


“ನಿನ್ನ ಕಾಂಬ ಉನ್ಮಾದದಿ
ಇನ್ನಾವುದನರಿಯದವಳು,
“ನಾಣು ಜಾಣು ರೀತಿ ನೀತಿ
ಮಾನಾದರ ಕಾಣದವಳು,

“ನೀನೆ ಹೇಳು ನಲ್ಲಾ….!
“ನೀನೆ ಹೇಳು ನಲ್ಲ, ಮಾಡ-
ಲೇನು ನಾನದೆಲ್ಲಾ!”


ಬಿನ್ನವಿಸಲು ನನ್ನಿ ಕತೆ
ಉನ್ಮಾದಿನಿಯಿವಳೆನ್ನುತೆ
ಚೆನ್ನ ಮರಳಿ ತೆರಳುವನೇ-
ನನ್ನೊಳು ಕೀಳ್‌ಗಣ್ಣಿರಿಸುತೆ ?
ಅಹುದೆ ತೆರಳಬಹುದೇ…?
ಅಹುದೆ ತೆರಳಬಹುದೆ ? ಅವಗೆ
ನನ್ನಿರವಿದು ಅರಿದೇ ?


ನನ್ನಿರವಿದು ತಿಳಿಯದೇನು ?
ಮನ್ನೆಯನವ ಮರುಳನೇನು ?
ನನ್ನಿ ಯು ತನಗಾಗಿ ಈಕೆ
ಉನ್ಮಾದಿನಿಯಾದಳೆನುತೆ

ಕರೆವ ಕರುಣೆಯಿಂದೆ….
ಕರೆವ ಕರುಣೆಯಿಂದೆ, ನನ್ನ –
ನಿರಿಸಿಕೊಳುವ ಮುಂದೆ.
ಇರಿಸಿಕೊಳುವ ಮುಂದೆ, ಒಡನೆ
ಬೆರೆವ ನಲುಮೆಯಿಂದೆ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...