Home / ಕವನ / ಕವಿತೆ / ಕಸವೂ ನಕ್ಷತ್ರವೂ

ಕಸವೂ ನಕ್ಷತ್ರವೂ


ಬಯಲಿನಲಿ ಕೂತು
ಆಕಾಶಕ್ಕೆ ಕಣ್ಣು.
ಬೆಳ್ಳಂಬೆಳಗೇ ತಾರೆಗಳ ಹುಡುಕಿ
ಕಿತ್ತು ಪೋಣಿಸಿ
ಮಾಲೆ ಮಾಡುತ್ತ
ಮಡಿಲು ತುಂಬಿಕೊಳುವುದರಲೇ ಮಗ್ನ
ಈ ಬಯಲ ಬುದ್ಧ.


ಗುಡಿಸಿದ ರಾಶಿ ಬೀದಿ ಕಸ
ತನ್ನ ಪುಟ್ಟ ಬೊಗಸೆಗೆ ತುಂಬಿ
ದಿನವೂ ಪುಟ ಪುಟನೆ ಓಡಿ ಬಂದು
ಅವನ ಪಾದ ಬುಡಕ್ಕೆ ಸುರುವಿ
ತಾರೆಗಳ ಮಾಲೆ ಕಟ್ಟುತಾ
ಮೋಹಕ್ಕೆ ಬಿದ್ದವನ ಮೈತಡವಿ
ಎಬ್ಬಿಸಿ
ಇಹಕ್ಕೆ ಕಣ್ಬಿಡಿಸಿ
ಕಲ್ಲು ಹೂವು ಮುಳ್ಳು ಕಾಗದದ ಚೂರು…..
ಒಂದೊಂದೇ
ಅವಶೇಷ ಎತ್ತಿ ಹಿಡಿದು
ಪ್ರತಿ ಕಸದ ಇತಿಹಾಸ ವರ್ತಮಾನ
ಬಿಡಿ ಇಡಿಯಾಗಿ ಏರಿಳಿತದ ದನಿಯಲ್ಲೇ
ಕಥೆ ಬಿಡಿಸಿಡುತ್ತದೆ
ಈ ಬೀದಿ ಗುಡಿಸುವ ಜೀವ.


ಸಾಣೆಗೆ ಸಿಕ್ಕದ ಚೂಪುಗಲ್ಲು
ತುಳಿದು ಬಾಡಿಸಿದ ಹೂವು
ಚುಚ್ಚಲು ಕಾದಿರುವ ಮುಳ್ಳು
ಒಡೆದ ಬಳೆ ಚೂರು
ರಕ್ತದ ಕಲೆಯ ಬಟ್ಟೆ ಚಿಂದಿ
ಒಡೆದ ಭ್ರೂಣದ ಪಳೆಯುಳಿಕೆ…..
ಕಸದ ಮಣ್ಣಿನ ತುಂಬಾ ನೋವು.
ಅವನ ಪಾದಕ್ಕೆ ಕಸ ಸುರುವಿ
ಕಣ್ಣೀರಲೇ ಕೈ ತೊಳೆದರೂ
ಅವಳ ಪುಟ್ಟ ಬೊಗಸೆಯೊಂದು
ಸದಾ ಸುಡುವ ಕುಲುಮೆ.


ಅವನಿಗೆ ಕತೆ ಹೇಳುತ್ತಾ ಹೇಳುತ್ತಾ
ಕಸವಾಗಿಸಿದವರ ನಿರ್ದಯತೆಗೆ
ಕುದಿಯುತ್ತಾ ಸಿಡಿಯುತ್ತಾ
ಬಿಕ್ಕುತ್ತಾ ಉಮ್ಮಳಿಸಿ ಅಳುತ್ತಾಳೆ.


ಅವಳ ಮನ ನೇವರಿಸಿ ಸಂತೈಸುವ
ಬಯಲ ಬುದ್ಧ
ತಲೆನೇವರಿಸುತ್ತಾ
ಹೆಗಲ ಮೇಲಿನ ಚುಂಗಿನಲಿ
ಕಣ್ಣೀರೊರೆಸುತ್ತಾ
ಪ್ರತಿ ಕಸದ ಕಥೆಗೂ
ತಾನೇ ಅದಾಗಿ,
ಭವಿಷ್ಯ ನೂಲುತ್ತಾನೆ ಕರುಳ ನೂಲಿನಲಿ.


ಮುಟ್ಟುತ್ತಾ ಮುಟ್ಟುತ್ತಾ
ಕಸದ ಕಲ್ಲು ನಯವಾಗಿಸುತ್ತಾ
ಚೂಪು ಮುಳ್ಳಿನ ಮೊನೆ ಮುರಿಯುತ್ತಾ
ಬಳೆ ಚೂರು ಗುಂಡಗೆ ಅಂಟಿಸುತ್ತಾ….
ಈ ಬಯಲ ಬುದ್ಧ
ಮುರಿದ ಹೂವಿನ ದಳಗಳ
ದೇಟಿಗೆ ಜೋಡಿಸುತ್ತಾ… ಇರುತ್ತ.


ಇರುತ್ತಾ,
ಈ ಬೀದಿ ಗುಡಿಸುವ ಜೀವ
ಅವನ ಪಾದಕ್ಕೆ
ಕಸ ಸುರುವುತ್ತಾ
ಕತೆ ಹೇಳುತ್ತಾ
ಅವನ ತಾರೆಗಳ
ಮಡಿಲಿಗೆಳೆದುಕೊಂಡು
ತಾನೂ
ಮಾಲೆ ಕಟ್ಟುತ್ತಾಳೆ!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...