Home / ಕವನ / ಕವಿತೆ / ಜೀವನ ಚಿತ್ತಾರ

ಜೀವನ ಚಿತ್ತಾರ

ನಾನು ಚಿತ್ರಿಕನಲ್ಲ
ಆದರೂ ಬಾಳಿನೊಂದು ಹಾಳೆಯಲಿ
ಚಿತ್ತಾರ ಬರೆಯ ಬಯಸಿದೆ.
ನನ್ನ ಬೆರಳುಗಳಲ್ಲಿ ರೇಖೆಗಳನ್ನೆಳೆಯುವ ಕಸುವಿಲ್ಲ
ಕುಸುರಿ ಕೆಲಸದ ಚತುರತೆಯಿಲ್
ಬಣ್ಣಗಳ ಬಾಂಡಲಿಯೂ ನನ್ನಲ್ಲಿಲ್ಲ.
ಆದರೂ ಆಸೆ –
ಬಾಳ ಕೊನೆಯ ಸಂಪುಟದ ಒಂದು ಹಾಳೆಯಲಿ
ಜೀವನ ಚಿತ್ತಾರ ಬರೆಯುವಾಸೆ.
ಯಾವ ಚಿತ್ತಾರ ಬರೆಯಲಿ?

ಪ್ರೀತಿ, ಪ್ರೇಮ, ಪ್ರಣಯ?
ಇಲ್ಲ, ಎಲ್ಲರೂ ಬರೆಯುತ್ತಾರೆ ಅದನ್ನು?!
ಆದರೆ ಯಾರಿಗೂ ಅರ್ಥವಾಗದ
ಬಣ್ಣ ಬಣ್ಣದ ಗೋಜಲದು.

ಸಾವು, ನೋವು, ಆಗಲಿಕೆ, ದುಃಖ?
ಇಲ್ಲ. ಇದು ಎಲ್ಲರ ಬಾಳಲ್ಲೂ
ಬರೆಯಲಾಗುವ ಕರಿಬಣ್ಣದ ಚಿತ್ರಗಳು
ಅದರಲ್ಲೇನಿದೆ ವಿಶೇಷ?

ಸತ್ಯ, ನ್ಯಾಯ, ನೀತಿ, ಧರ್ಮ?
ಇಲ್ಲ. ಇದಕ್ಕೆಲ್ಲ ಈಗ ಅರ್ಥವೇ ಇಲ್ಲ.
ಕ್ರೌರ್ಯ, ಕೊಲೆ, ಸುಲಿಗೆ, ಅತ್ಯಾಚಾರ?
ಇಲ್ಲ. ಈಗ ಎಲ್ಲೆಲ್ಲೂ ಅದೇ ಚಿತ್ರ.

ಮತ್ತಾವ ಚಿತ್ತಾರ ಬರೆಯಲಿ?
ಭವಿಷ್ಯದ ಚಿತ್ರ ಅದಾಗಬೇಕು
ಜೀವನ ಪ್ರೀತಿ ಅಲ್ಲಿರಬೇಕು
ರೇಖೆಗಳ ಸಿಕ್ಕುಗಳಿಲ್ಲದ, ಬಣ್ಣಗಳ ಗೊಂದಲಗಳಿರದ
ನನ್ನ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳು
ನೋಡಿ ಅರ್ಥಮಾಡಿಕೊಳ್ಳಲಾಗುವ
ಯಾರಕಾಲಕ್ಕೂ ಮುಂದುವರಿಸಲಾಗುವ
ಚಿತ್ತಾರ ಅದಾಗಬೇಕು.

ವಿಶ್ವ ಪ್ರೇಮದ ಚಿತ್ರ,
ಪರಿಸರಮಾಲಿನ್ಯವಿರದ ಚಿತ್ರ
ತಂಪು ಗಾಳಿಯ ಸ್ಪರ್ಶಕೆ
ಮರಗಿಡಗಳು ತೊನೆದಾಡುವ ಚಿತ್ರ
ಹೂಗಳು ನಲಿದಾಡುವ ಚಿತ್ರ
ಜಾತಿ ಮತ ಭೇದ ಭಾವಗಳಿಲ್ಲದೆ
ಎಲ್ಲರೊಂದಾಗಿ ನಲಿಯುವ ಚಿತ್ರ
ಮಕ್ಕಳ ಮುಖ ತುಂಬ ನಗುಚೆಲ್ಲುವ ಚಿತ್ರ
ಅವರಿಗಿಷ್ಟವಾದ ಗೆರೆ ಎಳೆದು ಬಣ್ಣ ತುಂಬಿದರೂ
ಹಾಳಾಗದ ಚಿತ್ರ ಅದಾಗಬೇಕು.

ನಾ ಬರೆವ ಚಿತ್ರ ಜೀವಂತಿಕೆಯ ಪುಟಿಸುವ
ಜೀವನದ ಮುಂದುವರಿಕೆಯ ಚಿತ್ರವಾಗಬೇಕು,
ಮನಕ್ಕೆ ತಂಪು ನೀಡುವ ಚಿತ್ತಾರವಾಗಬೇಕು
ಎಂದು ಬಯಸುತ –
ಯಾವ ಮುಖವಾಡಗಳಿಲ್ಲದೆ ನಾನೇ ನಾನಾಗಿ ನಿಂತು
ನನ್ನ ಬಯಕೆಯ ಚಿತ್ತಾರ ಬರೆಯಲು
ರೇಖೆಗಳ ಬಣ್ಣಗಳ ಹುಡುಕತೊಡಗಿದೆ.
ರೇಖೆಗಳು ಬಣ್ಣಗಳು ಕೈಗೆ ಸಿಗಲಿಲ್ಲ;
ಬರೆಯ ಬೇಕೆಂದು ಬಯಸಿ ರೂಪಿಸಿದ ಚಿತ್ರ
ಹಾಳೆಯಲಿ ಮೂಡಿ ಬರಲೇ ಇಲ್ಲ.
ಹಾಳೆ ಖಾಲಿಯಾಗಿಯೇ ಉಳಿಯಿತು!
ಇನ್ನೊಬ್ಬ ಚಿತ್ರಕನ ಕಾಯುತ್ತಾ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...