ಅಂತರಾರಾಮ

ಹೃದಯದಾಕಾಶವಿದು ಅದುರಿ ಗಡ ಗದ್ದರಿಸಿ
ಪ್ರೇಮವಂಕುರಿಸಿ ಸೌರಭವು ಹಾರಿ
ಭೇದಿಸುತ ಸಪ್ತತಲ ಇಂದ್ರಚಂದ್ರರ ಲೋಕ
ಪಾರ ಅಪರಂಪಾರ ದೂರ ಸೇರಿ

ಆವ ಲೋಕವ ಕಾಣೆ-ದಿವ್ಯಜ್ಯೋತಿಯ ಕಂಡೆ
ಕಣ್ಣರಳಿ ಬಂತಾಗ ಭವ್ಯದೃಷ್ಟಿ
ಆವ ಆಶೆಯ ಪಾಶವೆಸಗಿಲ್ಲ ಬಿರುಗಾಳಿ
ಬೀಸಿ ಸೂಸಿತು ಈ ಪ್ರಕಾಶವೃಷ್ಟಿ

ನಲ್ಲನಲ್ಲೆಯ ಪ್ರೇಮ ಬಲ್ಲೆನೆಂಬುವ ಬಿರುದು
ಹದಿನಾಲ್ಕು ಲೋಕಕ್ಕೆ ತಟ್ಟಿಮುಟ್ಟಿ
ಎಲ್ಲೆಡೆಗೆ ವ್ಯಾಪಿಸಿತು ಬೆಳ್ಳಬೆಳು ಬೆಳಕಾಗಿ
ನನ್ನಲ್ಲೆ ಆ ಕಳೆಯ ಮೊಳಕೆ ಹುಟ್ಟಿ

ಉರಿದುರಿದು ಉರಿದೆದ್ದ ಆ ಊರ್‍ಮೆಯುರಿಯಲ್ಲಿ
ಒಂದಾಗಿ ಸದಾ ಸವಿಯನುಂಡೆ
ಸುರರು ಸುರಗುರು ಸೂರ್ಯಚಂದ್ರರೂ ಕಾಣದಾ
ಬೆಳಕಿನುನ್ಮಾದದಾ ಕಾಂತಿ ಕಂಡೆ

ಪ್ರೇಮದಾಚೆಯ ಊರ್‍ಮೆ ಪ್ರೇಮಕ್ಕೆ ಬೀಜವದು
ಪ್ರೇಮದಾ ಫಲವಾಗಿ ಫಲಿಸಿ ನಿಂದು
ಉಮ್ಮಳಿಸಿ ತನ್ಮಯತೆ ಪಾವಿತ್ರ್ಯ ಪರವಶತೆ
ಪರದೆಗಳ ಹರಿಹರಿದು ಸುಳಿದು ಬಂದು

ವೇದಶಾಸ್ತ್ರ ಪುರಾಣ ವರ ಕುರಾನಗಳೆಲ್ಲ
ಕುಣಿಕುಣಿದು ನನ್ನ ಊರ್‍ಮೆಯೊಳೆ ಹುಟ್ಟಿ
ಅಡಗಿಹವು ಇಡಗಿಹವು ಎಲ್ಲೆಡೆಗೆ ನುಡಿಯುವವು
ಊರ್‍ಮೆಕೂರ್‍ಮೆಯೆ ಭವ್ಯದಿವ್ಯ ಸೃಷ್ಟಿ

ಮರವು ಮತ್ಸರ ಕರಗಿ ಕಷ್ಟನಷ್ಟವು ಸುಟ್ಟು
ಭರದಿ ಭಸ್ಮಿಭೂತವಾಗಿ ಹಾರಿ
ಅರವು ಅಗಲಾಗಿ ಅದ್ಭುತದ ಅಘಟಿತ ಶಕ್ತಿ
ಹೆಡಕರಿಸಿ ಹೊಳೆದು ಕುಡಿಮಿಂಚುದೋರಿ

ಘನಸಿರಿಯ ಚಿನ್ಮಯ ಚಿದಾನಂದವನು ಕಂಡೆ
ಹೊರಮರೆದು ಒಳ ಉರ್‍ಮೆ ಕುದುರೆ ಏರಿ
ನೆನಪುದೋರಿತು ಇತ್ತ ಕನಸು ಹರಿಯಿತು ಅತ್ತ
ಹತ್ತುತಾಸಿನ ಹಿಗ್ಗು ಹಾಡನೇರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೇಗಿಲು
Next post ಭವಿಷ್ಯದ ಚಿಂತೆ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…