Home / ಕವನ / ಕವಿತೆ / ನನಗೋ ಇಂಥ ಹೆಳವು…

ನನಗೋ ಇಂಥ ಹೆಳವು…

ಅಯ್ಯೋ…ನೋಡಲ್ಲಿ ಕಂದನನ್ನು
ಅದೇನು ಹೀಗೆ ಏರುತ್ತಿದೆ ಮೆಟ್ಟಿಲಿನಂತೆ?
ಮರಕ್ಕಾತು ಜಡವಾಗಿ ಕೂತಿದ್ದಕ್ಕೇ
ಅವನನ್ನೇನು ಕೊರಡೆಂದುಕೊಂಡಿದೆಯೋ?

ಕಾಲುಚಕ್ರ ಸೋತ ಹೊತ್ತಲ್ಲಿ
ಮರಕ್ಕೊರಗುತ್ತಾನೆ ಕುಸಿದು
ಅವನೊಂದಿಗೇ ಮರಕ್ಕೂ
ಅದರ ಮೇಲಿನ
ಸಕಲೆಂಟು ಜೀವಜಂತುಗಳಿಗೂ
ಗಾಢ ಮೈಮರೆವಿನ ವಿಸ್ಮೃತಿ.

ಕಂದನಿಗೇನು ಗೊತ್ತು ಪಾಪ?
ಅವನೋ ಎದ್ದರೆ
ತಿರುಗಾಲ ತಿಪ್ಪನಂತಾ ಅಲೆಮಾರಿ
ಕೂತರೆ ಹೆಬ್ಬಂಡೆಯಂತಾ ಸೋಮಾರಿ

ಇದಕ್ಕದೆಂಥಾ ಹುಚ್ಚು ಉಮೇದೋ?
ಮರವೋ
ಗಾಢ ನಿದ್ದೆ ಹೋದ ಅವನೋ
ಮೂಲೆ ಹಿಡಿದ
ಮುರುಕು ಕುರ್ಚಿಯೋ
ಯಾವುದಾದರೂ ಸರಿ
ಅದರ ಮೈಮೇಲೆ ಏರಿ
ಹಿಪ್ ಹಿಪ್ ಹುರ್ರೇ ಸಡಗರ.

ನೀನಾದರೂ ಹೇಳಬಾರದೇ
ಅದವನ ದೇಹವೆಂದು?
ಅದನ್ನೇ ಮೆಟ್ಟಿಲಾಗಿಸಿ
ಪುಟ್ಟ ಪುಟಾಣಿ
ಅಂಬೆಗಾಲಿಕ್ಕುತ್ತಾ
ಮೆಲ್ಲಗೆ ತೊಡೆಯೇರಿ ಕುಳಿತು
ಅದೋ ನೋಡು
ನಗು ಮುಕ್ಕಳಿಸುತಿದೆ ಮೊಗ,
ಥೇಟ್ ಪೀಠಾಧಿಪತಿಯ ಠೀವಿ!

ಮತ್ತೆ ನೋಡಿಗ
ಹುಮ್ಮಸ್ಸಿನಲಿ ಮೇಲೇರಿ
ಪಕ್ಕೆಲುಬಿನ ಮೆಟ್ಟಿಲಿಗೆ
ಗುಲಾಬಿ ಕಾಲಿನ ಪಾದವೂರಿದೆ
ಅವನಿಗೋ ಕಚಗುಳಿಯಾದರೂ ಆಗಬಾರದೇ?
ಮಿಸುಕಿದರೆ ಕೇಳು!

ಅಲೆಲೆ…ನೋಡು
ಹೊಟ್ಟೆಯುಬ್ಬಿಗೆ
ಇನ್ನೊಂದು ಪಾದ!
ಬಿಗಿ ಹಿಡಿತಕ್ಕೆ ಅವನದೇ ಜುಟ್ಟು!
ಹುರುಪಿನ ಏರು
ದಿಗ್ವಿಜಯದ ನಗೆ
ಅವಿರತ ಚಾರಣ
ಆಯಾಸವೇ ಆಗದಲ್ಲಾ ಕಂದನಿಗೆ?
ಅವನಿಗೋ ಎಚ್ಚರವಿಲ್ಲಾ
ಇದಕ್ಕೋ ಸುಸ್ತೆಂಬುದೇ ಇಲ್ಲಾ!

ಈಗವನ ಎದೆಯೂ
ಕಂದನಿನ್ನೊಂದು
ಪಾದಕ್ಕೆ ಸೋಪಾನವಾಯ್ತೇ?
ನೇರ ಮೂಗಿನುಬ್ಬಿಗೆ ಬಾಯಿ!
ನೆಕ್ಕಿ ಚೀಪಿ ರುಚಿ ನೋಡಿ….
ಮುಂದುವರೆದಿದೆ ದಿಗ್ವಿಜಯ ಯಾತ್ರೆ!

ಈಗ ನೋಡು,
ಏರುತ್ತಾ ಏರುತ್ತಾ
ಅವನ ಕತ್ತಿನ ಬಲಕ್ಕೊಂದು ಪಾದ
ಎಡಕ್ಕೊಂದು ಪಾದ
ಕುತ್ತಿಗೆಯ ಕುಳಿಯೇ
ಮತ್ತೊಂದು ಮಜಲು.

ಅವನ ಜುಟ್ಟು ಹಿಡಿದೇ
ಹಿಂದೆ ಮುಂದಾಗುವ ಸರ್ಕಸ್ಸು
ಅಯ್ಯೋ ಕಂದ ಬಿದ್ದಾತು ಎಚ್ಚರ…
ನೋಡವನ ತಲೆಯ ಮೇಲೆಯೇ ಕೂತು
ಮರಕ್ಕೊರಗಿದ ಭಂಗಿ!
ಥೇಟ್ ಕಳಸವಿಟ್ಟಂತೆ ತಲೆ ಮೇಲೆ…
ಪುಟಾಣಿ ಪುಟ್ಟ ಕೈ ಬಡಿಯುತ್ತಾ
ಕೇಕೆ… ಚಪ್ಪಾಳೇ…
ವಿಜಯೋತ್ಸವ…

ಕಂಡೋರ ದಿಟ್ಟಿ ತಾಕೀತು ಕಂದಮ್ಮಗೆ
ಮೂಲೆ ಕಸಬರಿಕೆ
ನಾಲ್ಕು ಕಡ್ಡಿಯ ಸುಟ್ಟು
ನೀವಳಿಸಿ ಒಗೆಯಬಾರದೇ ಆಚೆಗೆ?

ಇಷ್ಟೆಲ್ಲವಾದರೂ
ಅವನಿಗೋ ಮೈಮೇಲೆ ಖಬರಿಲ್ಲ.
ಕುಂಭಕರ್ಣನ ನಿದ್ದೆ
ಈ ಕಂದಮ್ಮನಿಗೋ
ಎಲ್ಲವೂ ಆಡಿದ್ದೇ ಆಟ.

ಅವನು ದಯಾಳು
ತಲೆಯೇರಿದ ಕಂದನನು
ಖಂಡಿತಾ ಬೇಕೆಂದೇ
ಕೊಡವಿ ಕೆಡವಲಾರ….

ಆದರವನಿಗೆ ಪಾಪ…
ಮೈಮೇಲಿನೆಚ್ಚರವೇ ಇಲ್ಲದೇ
ಧಡಕ್ಕನೆದ್ದು ಮೈ ಕೊಡವಿದರೆ….

ಕೊಡವಿದರೆ….
ಗತಿಯೇನು ಕಂದನದು?

ನನಗೋ ಇಂಥ ಹೆಳವು…
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...