Home / ಲೇಖನ / ಇತರೆ / ಹುಚ್ಚು ಯಾರಿಗೆ?

ಹುಚ್ಚು ಯಾರಿಗೆ?

ಪ್ರಿಯ ಸಖಿ,
ಅವಳು. ದಿನವೂ ಯಾರದಾದರೂ ಮನೆಯ ಜಗುಲಿಯ ಮೇಲೆ ತನ್ನ ದೊಡ್ಡ ಬಟ್ಟೆಯ ಗಂಟನ್ನು ಇಟ್ಟುಕೊಂಡು ಕೂರುತ್ತಾಳೆ. ಸದಾ ಬಾಯಿ ವಟಗುಟ್ಟುತ್ತಲೇ ಇರುತ್ತದೆ ಕೆಲವೊಮ್ಮೆ ಯಾವುದಾದರೂ ಹಾಡನ್ನು ರಾಗವಾಗಿ ಹಾಡುತ್ತಿರುತ್ತಾಳೆ. ಇನ್ನೊಮ್ಮೆ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕಿಯಂತೆ ಜೋರು ಜೋರಾಗಿ ಏನನ್ನೋ ಹೇಳುತ್ತಿರುತ್ತಾಳೆ. ಕೆಲವೊಮ್ಮೆ ಎತ್ತರದ ದನಿಯಲ್ಲಿ ಬಯ್ಯುತ್ತಿರುತ್ತಾಳೆ. ಇಂಗ್ಲೀಷನ್ನು ಅರೆದು ಕುಡಿದವಳೇನೋ! ನಿರರ್ಗಳವಾಗಿ ಇಂಗ್ಲೀಷಿನಲ್ಲಿ ಏನೇನೋ ವದರುತ್ತಿರುತ್ತಾಳೆ. ಶಿಷ್ಟ ಭಾಷೆಯಲ್ಲಿ ಹೇಳುವುದಾದರೆ ಅವಳೊಬ್ಬ ಮನೋರೋಗಿ. ಆಡುಭಾಷೆಯಲ್ಲಿ ಹೇಳುವುದಾದರೆ ಅವಳೊಬ್ಬ ಹುಚ್ಚಿ!

ನೋಡಲು ಲಕ್ಷಣವಾಗಿರುವ, ಸುಸಂಸ್ಕೃತ ಮನೆತನದವಳೆನಿಸುವ ಮಧ್ಯ ವಯಸ್ಸಿನ ಈ ಹೆಣ್ಣಿಗೆ ಅದ್ಯಾವ ಆಘಾತವಾಗಿರಬಹುದು? ಅವಳ ಬುದ್ದಿ ಕೆಡಲು ಕಾರಣರಾರು? ಸಮಾಜವೇ? ಮನೆಯವರೇ? ಮಿತ್ರರೇ? ಶತ್ರುಗಳೇ? ಹೆದರಿಕೆ ಹುಟ್ಟಿಸುವಂಥಾ, ಅಸಹ್ಯಗೊಳ್ಳುವಂತಾ ವೇಷ ತೊಟ್ಟು, ತಲೆಬಿರಿದುಕೊಂಡು, ಚಂಡಿಚಾಮುಂಡಿಯಂತೆ ಅಟ್ಟಹಾಸದಿ ನಗುತ್ತಾ, ಬೈಯ್ದುಕೊಳ್ಳುತ್ತಾ ತಿರುಗುವ ಇವಳು ಹೀಗೇಕಾದಳು?

ತಿನ್ನಲು ಏನಾದರೂ ಕೊಟ್ಟರೆ Thanks ಎಂದು ಹೇಳುವಷ್ಟು ಬುದ್ಧಿಯೂ, ತನ್ನನ್ನು ಕಲ್ಲಿನಿಂದ ಹೊಡೆಯಬಂದವರಿಗೆ ತಾನೂ ಕಲ್ಲಿನಿಂದ ಹೊಡೆದಟ್ಟಬೇಕೆಂಬ ಮಾನವ ಸಹಜ ತಿಳುವಳಿಕೆ ಇರುವ ಇವಳ ಸರಿಪಡಿಸಲಾಗುವುದಿಲ್ಲವೇ? ಅಥವಾ ಅವಳು ಸರಿಯಾಗುವುದು ಯಾರಿಗೂ ಬೇಕಿಲ್ಲವೇ? ಅವಳನ್ನು ಹುಚ್ಚಿಯಾಗಿಸಿದ ಸಮಾಜಕ್ಕೆ ಅವಳನ್ನು ಸರಿಪಡಿಸುವ ಜವಾಬ್ದಾರಿಯೂ ಇರಬೇಕಲ್ಲವೇ?

ಅವಳನ್ನೊಂದು ಮನರಂಜನೆಯ ವಸ್ತುವನ್ನಾಗಿ ಮಾಡಿಕೊಂಡು ಅವಳನ್ನು ಹಿಂಸಿಸಿ. ಗೋಳು ಗುಟ್ಟಿಸಿ, ಕಲ್ಲಿನಿಂದ ಹೊಡೆದು ತಮ್ಮ ವಿಕೃತ ಮನೋಭಾವವನ್ನು ಪ್ರದರ್ಶಿಸುವ ವ್ಯಕ್ತಿಗಳನ್ನು ಕಂಡಾಗ ಯಾರಿಗೆ ಹುಚ್ಚು? ಅವಳಿಗೋ? ಇವರಿಗೋ? ಅನಾಗರೀಕರಂತೆ ವರ್ತಿಸುತ್ತಿರುವ ಇವರು ಮನುಷ್ಯರೋ ಅಥವಾ ಮೃಗಗಳೋ ಎಂಬ ಪ್ರಶ್ನೆ ಕಾಡುತ್ತದೆ. ಬುದ್ಧಿ ಸ್ಥಿಮಿತದಲ್ಲಿಲ್ಲದಿದ್ದರೂ ತನ್ನನ್ನು ಹಿಂಸಿಸದವರಿಗೆ ಏನೂ ಮಾಡದೆ ತನಗೆ ತೊಂದರೆ ಕೊಡುವವರಿಗೆ ಮಾತ್ರ ತಾನೂ ತೊಂದರೆ ಕೊಡುವ ಆ ಹೆಂಗಸು ಬುದ್ಧಿ ಸರಿಯಿದ್ದೂ, ಅಮಾನವೀಯವಾಗಿ ಅವಳನ್ನು ಹಿಂಸಿಸಿ ಕಿರುಕುಳ ನೀಡುವ ಇಂತವರಿಗಿಂತಾ ಎಷ್ಟೋ ಮೇಲು ಎಂದೆನಿಸುತ್ತದೆ.

ಕಲ್ಲುಗಳಂದಾದ ಗಾಯದಿಂದ ಒಸರುವ ರಕ್ತಕ್ಕೆ ಮಣ್ಣು ಮೆತ್ತಿಕೊಳ್ಳುತ್ತಾ, ಕಣ್ಣಿನಲ್ಲಿ ನೀರು ಸುರಿಸುತ್ತಾ ಆ ಹೆಂಗಸು ‘ರಾಕ್ಷಸರು! ರಾಕ್ಷಸರು!’ ಎಂದುಕೊಳ್ಳುತ್ತಾ ಹೋಗುವಾಗ, ಬುದ್ಧಿ ಸರಿಯಿಲ್ಲದವರೂ, ಹಲವು ಬಾರಿ ನಿಜವನ್ನೇ ನುಡಿಯುತ್ತಾರಲ್ಲಾ? ಎಂದೆನಿಸುತ್ತದೆ ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...