Home / ಲೇಖನ / ಇತರೆ / ಹುಚ್ಚು ಯಾರಿಗೆ?

ಹುಚ್ಚು ಯಾರಿಗೆ?

ಪ್ರಿಯ ಸಖಿ,
ಅವಳು. ದಿನವೂ ಯಾರದಾದರೂ ಮನೆಯ ಜಗುಲಿಯ ಮೇಲೆ ತನ್ನ ದೊಡ್ಡ ಬಟ್ಟೆಯ ಗಂಟನ್ನು ಇಟ್ಟುಕೊಂಡು ಕೂರುತ್ತಾಳೆ. ಸದಾ ಬಾಯಿ ವಟಗುಟ್ಟುತ್ತಲೇ ಇರುತ್ತದೆ ಕೆಲವೊಮ್ಮೆ ಯಾವುದಾದರೂ ಹಾಡನ್ನು ರಾಗವಾಗಿ ಹಾಡುತ್ತಿರುತ್ತಾಳೆ. ಇನ್ನೊಮ್ಮೆ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕಿಯಂತೆ ಜೋರು ಜೋರಾಗಿ ಏನನ್ನೋ ಹೇಳುತ್ತಿರುತ್ತಾಳೆ. ಕೆಲವೊಮ್ಮೆ ಎತ್ತರದ ದನಿಯಲ್ಲಿ ಬಯ್ಯುತ್ತಿರುತ್ತಾಳೆ. ಇಂಗ್ಲೀಷನ್ನು ಅರೆದು ಕುಡಿದವಳೇನೋ! ನಿರರ್ಗಳವಾಗಿ ಇಂಗ್ಲೀಷಿನಲ್ಲಿ ಏನೇನೋ ವದರುತ್ತಿರುತ್ತಾಳೆ. ಶಿಷ್ಟ ಭಾಷೆಯಲ್ಲಿ ಹೇಳುವುದಾದರೆ ಅವಳೊಬ್ಬ ಮನೋರೋಗಿ. ಆಡುಭಾಷೆಯಲ್ಲಿ ಹೇಳುವುದಾದರೆ ಅವಳೊಬ್ಬ ಹುಚ್ಚಿ!

ನೋಡಲು ಲಕ್ಷಣವಾಗಿರುವ, ಸುಸಂಸ್ಕೃತ ಮನೆತನದವಳೆನಿಸುವ ಮಧ್ಯ ವಯಸ್ಸಿನ ಈ ಹೆಣ್ಣಿಗೆ ಅದ್ಯಾವ ಆಘಾತವಾಗಿರಬಹುದು? ಅವಳ ಬುದ್ದಿ ಕೆಡಲು ಕಾರಣರಾರು? ಸಮಾಜವೇ? ಮನೆಯವರೇ? ಮಿತ್ರರೇ? ಶತ್ರುಗಳೇ? ಹೆದರಿಕೆ ಹುಟ್ಟಿಸುವಂಥಾ, ಅಸಹ್ಯಗೊಳ್ಳುವಂತಾ ವೇಷ ತೊಟ್ಟು, ತಲೆಬಿರಿದುಕೊಂಡು, ಚಂಡಿಚಾಮುಂಡಿಯಂತೆ ಅಟ್ಟಹಾಸದಿ ನಗುತ್ತಾ, ಬೈಯ್ದುಕೊಳ್ಳುತ್ತಾ ತಿರುಗುವ ಇವಳು ಹೀಗೇಕಾದಳು?

ತಿನ್ನಲು ಏನಾದರೂ ಕೊಟ್ಟರೆ Thanks ಎಂದು ಹೇಳುವಷ್ಟು ಬುದ್ಧಿಯೂ, ತನ್ನನ್ನು ಕಲ್ಲಿನಿಂದ ಹೊಡೆಯಬಂದವರಿಗೆ ತಾನೂ ಕಲ್ಲಿನಿಂದ ಹೊಡೆದಟ್ಟಬೇಕೆಂಬ ಮಾನವ ಸಹಜ ತಿಳುವಳಿಕೆ ಇರುವ ಇವಳ ಸರಿಪಡಿಸಲಾಗುವುದಿಲ್ಲವೇ? ಅಥವಾ ಅವಳು ಸರಿಯಾಗುವುದು ಯಾರಿಗೂ ಬೇಕಿಲ್ಲವೇ? ಅವಳನ್ನು ಹುಚ್ಚಿಯಾಗಿಸಿದ ಸಮಾಜಕ್ಕೆ ಅವಳನ್ನು ಸರಿಪಡಿಸುವ ಜವಾಬ್ದಾರಿಯೂ ಇರಬೇಕಲ್ಲವೇ?

ಅವಳನ್ನೊಂದು ಮನರಂಜನೆಯ ವಸ್ತುವನ್ನಾಗಿ ಮಾಡಿಕೊಂಡು ಅವಳನ್ನು ಹಿಂಸಿಸಿ. ಗೋಳು ಗುಟ್ಟಿಸಿ, ಕಲ್ಲಿನಿಂದ ಹೊಡೆದು ತಮ್ಮ ವಿಕೃತ ಮನೋಭಾವವನ್ನು ಪ್ರದರ್ಶಿಸುವ ವ್ಯಕ್ತಿಗಳನ್ನು ಕಂಡಾಗ ಯಾರಿಗೆ ಹುಚ್ಚು? ಅವಳಿಗೋ? ಇವರಿಗೋ? ಅನಾಗರೀಕರಂತೆ ವರ್ತಿಸುತ್ತಿರುವ ಇವರು ಮನುಷ್ಯರೋ ಅಥವಾ ಮೃಗಗಳೋ ಎಂಬ ಪ್ರಶ್ನೆ ಕಾಡುತ್ತದೆ. ಬುದ್ಧಿ ಸ್ಥಿಮಿತದಲ್ಲಿಲ್ಲದಿದ್ದರೂ ತನ್ನನ್ನು ಹಿಂಸಿಸದವರಿಗೆ ಏನೂ ಮಾಡದೆ ತನಗೆ ತೊಂದರೆ ಕೊಡುವವರಿಗೆ ಮಾತ್ರ ತಾನೂ ತೊಂದರೆ ಕೊಡುವ ಆ ಹೆಂಗಸು ಬುದ್ಧಿ ಸರಿಯಿದ್ದೂ, ಅಮಾನವೀಯವಾಗಿ ಅವಳನ್ನು ಹಿಂಸಿಸಿ ಕಿರುಕುಳ ನೀಡುವ ಇಂತವರಿಗಿಂತಾ ಎಷ್ಟೋ ಮೇಲು ಎಂದೆನಿಸುತ್ತದೆ.

ಕಲ್ಲುಗಳಂದಾದ ಗಾಯದಿಂದ ಒಸರುವ ರಕ್ತಕ್ಕೆ ಮಣ್ಣು ಮೆತ್ತಿಕೊಳ್ಳುತ್ತಾ, ಕಣ್ಣಿನಲ್ಲಿ ನೀರು ಸುರಿಸುತ್ತಾ ಆ ಹೆಂಗಸು ‘ರಾಕ್ಷಸರು! ರಾಕ್ಷಸರು!’ ಎಂದುಕೊಳ್ಳುತ್ತಾ ಹೋಗುವಾಗ, ಬುದ್ಧಿ ಸರಿಯಿಲ್ಲದವರೂ, ಹಲವು ಬಾರಿ ನಿಜವನ್ನೇ ನುಡಿಯುತ್ತಾರಲ್ಲಾ? ಎಂದೆನಿಸುತ್ತದೆ ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...