Home / ಕವನ / ಕವಿತೆ / ಶಿಲ್ಪಿ

ಶಿಲ್ಪಿ

ಕೆಂಪು ವಜ್ರ ನೀಲ ಪುಷ್ಯ
ರಾಗ ವೈಡೂರ್ಯವು
ಚಂಪರಾಗ ಚಂದ್ರಕಾಂತ
ನಾಗ ಗೋಮೇಧಿಕ

ಇಂತು ನೋಡಿ ಒಡೆದು ಕಡೆದು
ತಿಕ್ಕಿ ನಾಸಿಕ್ಕಿದೆ
ಚಿಂತೆಯಲ್ಲಿ ಸಾಣೆಯಿಟ್ಟು
ಮಿಕ್ಕುವನ್ನಿಕ್ಕಿದೆ

ಇಡಲು ಕಳಸ ಗೋಪುರಾದಿ
ರತುನ ಮಂದಿರಕೆನೆ
ನುಡಿಯ ಗಣಿಗಳಿಂದ ತೆಗೆದೆ
ರತುನ ಗಲ್ಲೆಂಬಿವ

ಹೂಡಿ ನೋಡಿ ತೋರಣಾದಿ
ಅಕ್ಷರಾಲಯಕನೆ
ಜೋಡಿಸಿಹೆನು ರೂಢಿಯೊಳಗೆ
ಅಕ್ಷರಾಲಯವಿದ

ಕಣ್ಣಿವೆಂದು ಉಣ್ಣದಂಥ
ರೂಪ ಸೌಂದಯ್ಯವು!
ಅಣ್ಣ ಕೇಳು ಚಲ್ವರೂಹ
ರೂಪ ರಾಗಾದಿಯು

ದ್ವಾರ ತೋರಣಾದಿಯಿಲ್ಲಿ
ಬಿಜಯಿಸೈ! ಅತಿಧಿಯೆ!
ದ್ವಾರ ದರ್ಪಣಾದಿಯಲ್ಲಿ
ಬಿಜಯಿಸೈ ಪಧಿಕನೆ

ಸಾಗಿ ಮುಂದೆ ನೀಡು‌ಅಲ್ಲಿ
ಅತ್ತಲಲ್ಲಿ ಕರಗಳ!
ರಾಗಿಣಿಯರು ಬಂದರಲ್ಲಿ
ಮತ್ತಕಾಶಿನಿಯರು!

ಇಲ್ಲಿ ಸಾಲಗೊಂಬೆ ನೋಡು
ನೋಡು ಕೈಸಾಲೆಯ!
ಇಲ್ಲಿ ಏರುಗಲ್ಲ ರಾಜಿ
ನೋಡು ವೈಭೋಗವ!

ಭೋಗ ಸಾಧ್ಯ ಸ್ವಪ್ನ ಸುಧೆಯ
ದೆಂದೆಯಾ ಈ ದಿನ
ಯೋಗ ಸಾಧ್ಯವೆಂಬ ರೂಪಿ
ವೆಂದೆಯಾ! ಈ ದಿನ!

ಏಳುನೆಲೆಯ ಶಿರಿಯನಲ್ಲಿ
ಶೀಲನೀ ಕಂಡೆಯ
ಭಾಳವುಂಡು ದಣಿದೆನೆಂದು
ಲೋಲನೀನೆಂದೆಯ!

ಇಷ್ಟು ರೂಪು ನೋಡಿ ದಿಟ್ಟಿ
ನೊಂದುದೇ ನೆಂಬೆಯ
ಇಷ್ಟ ದೈವ! ಕಾಣಲಿಲ್ಲ!
ವೆಂದಿತೇ ಹೃದಯವು!

ಕಾಣಲಿಲ್ಲ ಕಾಂತೆಯನ್ನು
ಕಾಂತೆಯೆಲ್ಲೆಂದಿತೆ?
ಜಾಣ ತಿರುಗು ವಳಗೆ ನೋಡು
ಕ್ಲಾಂತ! ನೀ ಮುಂಗಡೆ.

ಬಿಗಿದು ಆಶೆ ಬಿಗಿದು ಊಹೆ
ಮುಗುದ! ಮೆಲ್ಲನಡಿಯಿಡು
ಮುಗಿಲಿನಂತೆ ತೆರೆಯ ಕಡೆಗೆ
ಮುಗುದ! ಮೆಲ್ಲನಡಿಯಿಡು.

ಏಳು ಹೊಸಿಲ ದಾಟ ಬೇಕು
ಏಳು ತರೆಯ ಹಾರಿಸಿ
ಏಳು ವರಣ ಜೋತಿ ರಾಜಿ
ಏಳ ನೀ ದಾಟುವೆ.

ತೆರೆಯ ಶೆಳೆದು ನೋಡು ವಳಗೆ
ಇರುವ ಮೂರ್ತಿ ಯಾವುದು?
ಶಿರಿನಿಕೇತನಕ್ಕೆ ಈಕೆ
ಅರಿಯೆ ನೀ ರಾಣಿಯು!

ಬಲ್ಲೆ ಬಲೆ! ನೀನು ಇವಳ
ಬಲ್ಲೆಯೈಯ್ಯ! ಅತಿಥಿಯೆ!
ಚಲ್ಪ ರೂಹ ತೇಜದಲ್ಲಿ
ಎಲ್ಲೋ ನೀ ಮಿಂದಿಹೆ.

ಇದುವೆ ಪದುಮವನ್ನು ಹುಡಕಿ
ಭ್ರಮರ ಕೋರಿಕೆಗಳು
ಚದುರ! ತಿರುಗಿ ಯೇಳು ಲೋಕ
ಅಮಮ! ಹಿಂದಿರುಗಿವೆ.

ಹೃದಯ ರಮೆಯನದಯಳೆಂದು
ವಿರಹಿ ನೀ ನೊಂದೆಯ?
ಚದುರೆಯನ್ನು ವಿರಹ ಮನವು
ಅರಸಿ ಕಾಣದಿದ್ದಿತೇ?

ನೀನು ಕಂಡು ಭ್ರಮಿಸಿ ಪೋದ
ನಾಳೆಯೆಂಬಾದಿನ
ರಾಣಿ! ನಿನ್ನ ಧ್ಯಾನದಲ್ಲಿ
ಭಾಳ ಮೈಮರೆತಿರೆ

ಚಂಡಬಲರು ದೈತ್ಯ ಸುತರು
ದೂರ ನೀರವರಿರೆ!
ಕಂಡು ಶೆಳೆದು ವೊಯ್ದರವಳ
ನೀರು ಯೇಳ ರಾಚೆಗೆ!

ರಸಿಕ ! ನಿನ್ನ ನೆನಹಿನಲ್ಲಿ
ಕನಲುತಿರ್ದೀಕೆಯ
ಸಸಿಯ ಮೊಗವ ಕಂಡೆನೊಮ್ಮ
ಕನಸ ಸಂಚರಿಯಲಿ.

ಕಮಲ ನಾಳ ದೊಳಗೆ ಯಿಳಿದು
ಕಂಡೆ ನಾ ಶರೆಮನೆ.
ರಮಣಿ ಇವಳ ಬಿಡಿಸಿ ತಂದೆ
ಪುಂಡರಂ ಖಂಡ್ರಿಸಿ.

ನುಡಿಯ ಲಲಿತ ಗೃಹವ ಕಟ್ಟಿ
ಕುವರಿಯನ್ನಿಟ್ಟೆನು,
ಒಡನೆ ಛಲವ ಹಿಡಿದವಳವಳು
ಅವನ ತೋರೆನುತಲಿ!

ರತುನ ದ್ವಾರ ಮುಚ್ಚದಿಹುದು
ಸತತ ರಾಗಿಣಿಯರು
ಪಧಿಕ! ರಸಿಕ! ಬರುವನೆಂದು
ಸತತ ಕಾದಿರುವರು!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...