Home / ಕವನ / ಕವಿತೆ / ಅದೇ ಕಥೆ

ಅದೇ ಕಥೆ

ಆಡುಗೂಲಜ್ಜಿ ಕಣ್ಣುಮುಚ್ಚಿ ಹೇಳುತ್ತಾಳೆ ಕಥೆಯ,
ನೇಯುತ್ತಾಳೆ ರಾಗವಾಗಿ ವರ್ತಮಾನ ವ್ಯಥೆಯಾಗುವ
ಸತ್ತ ಸುಖದ ಸ್ಮೃತಿಯ.
ಕಣ್ಣಿಂದ ದಳದಳ ನೀರು
ಹೆಪ್ಪುಮುಪ್ಪಿನ ಸುಕ್ಕುತೆರೆ ಸರಿಸಿ ಮುಖದಲ್ಲಿ
ಏಳುವುವು ನೂರು
ಜೇನುಗೂಡನು ಹಿಂಡಿಬಂದ ಅನುಭವ ಸಾಲು:
“ಅಯ್ಯೋ ದೇವರೆ ಆಗೆಲ್ಲ ಎಂಥ ಕಾಲ!
ಎಂಥ ಬಾಲ ಕಪ್ಪೆಗೆ, ಏನು ಕೋಡು ಕುದುರೆಗೆ
ಅರಳಿಯೆಲೆಯ ಕೆಂಪುಚಿಗುರೆ ಮೇವು ಹಂಸಪಕ್ಷಿಗೆ;
ಬೇಲಿಯಿರದ ಬೇಟ
ಕಾವಲಿರದ ತೋಟ
ದನಕಾಯುವ ದಡ್ಡ ಕೂಡ ತಪ್ಪಿ ಮೇಲೆ ಕೂತರೆ
ತಟಕ್ಕನೆಯೆ ಜೀವತುಂಬಿ ನುಡಿವ ಧರ್ಮಪೀಠ;
ಎಂಥ ಕೆಟ್ಟ ಹೆಣ್ಣಿಗೂ ಸರಸ್ವತಿಯ ಕಂಠ
ಅಪ್ಸರೆಯರ ಸೊಂಟ
ಗಂಡಸಾದರಂತು ಬಿಡು ಇಂದ್ರ ಅವನ ನೆಂಟ”.
ಹರಿಹರಿದಂತೆ ನೆರೆ ಬರುವುದು
ಕೊರಕಲಿನಲ್ಲಿ ಕಿಳಪಿಳ ಸರಿವ ಬಡಕಲು ತೊರೆಗೆ;
ಬಿಟ್ಟ ಬಾಯಾಗಿ
ನೆಟ್ಟ ಕಣ್ಣಾಗಿ
ಕೇಳುವುವು ಮಕ್ಕಳು
ಆತು ಅಜ್ಜಿ ಮೈಗೆ,
ಬೆರಗಾಗಿ ಕತ್ತಲಲ್ಲಿ ಕುರುಡ ಬಣ್ಣಿಸುತ್ತಿರುವ
ಬೆಳುದಿಂಗಳ ಕಥೆಗೆ.

ನಮಗೇನು ಗೊತ್ತು
ಹೋಮಧೂಮದಲಿ ಬುದ್ಧಪ್ರೇಮದಲಿ
ಅಶೋಕಧರ್ಮದ ಚಕ್ರಚಲನದಲಿ
ಗಾಡಿ ನಡೆದ ಗತ್ತು?
ಮನೆಯಿತ್ತು
ಮನೆಗೆ ಮಾಡಿತ್ತು;
ಹೆಂಚುದೋಣಿಗಳ ನಡುವೆ ಅಲ್ಲಲ್ಲಿ ತೂತೂ ಇತ್ತು;
ಹಗಲಲ್ಲಿ ಹೊನ್ನ ಸರಳು
ಇರುಳಲ್ಲಿ ಬೆಳುದಿಂಗಳ ಕೊರಳು
ದೇವರ ಮನೆಗೆ ಬೆಳಕ ಹಾಡಿತ್ತು.
ಮಳೆಗಾಲದಲ್ಲಿ ಮನೆ ಕೆರೆಯಾಗಿರಲಿಲ್ಲವೆ,
ಬೆಲ್ಲದ ವರ್ಣನೆಯಲ್ಲೇ ಬೇವಿನ ಮಾಹಿತಿ ಇಲ್ಲವೆ?
ಎದ್ದ ಕಲ್ಲು ಪೂಜಾರಿಯ ಲೆಕ್ಕಕ್ಕೆ ಜಮವಾಗಿ
ಜಾಗಟೆ ಮೊಳಗಿ
ಆರತಿ ಬೆಳಗಿ ಗುಡಿಯಲ್ಲಿ,
ಬಿದ್ದ ಕಲ್ಲುಗಳ ಪಾಡು
ಅಗಸನ ಬಟ್ಟೆಯ ಬಡಿತದ ತಾಳಕೆ ನುಡಿಸಿದ ಹಾಡು!

ಇತ್ತು ಆಗಲೂ ಎಲ್ಲ ಇತ್ತು
ಅಜ್ಜಿಯ ಹಾಡಿನ ಮಲ್ಲಿಗೆ ಜಾಡಿನ ತಳದ ಕೆದಕಿನಲಿ
ಮೂಳೆ ಮಜ್ಜೆಗಳ ನಾರುವ ಗೊಬ್ಬರವಿತ್ತು
ಕರ್ಣನ ಶೌರ್ಯ
ಧರ್ಮನ ಧೈರ್ಯ
ಅಂಬೆಯ ಪ್ರೀತಿ
ಭೀಷ್ಮನ ನೀತಿ
ಎಲ್ಲಕು ಕೂಡಿಯೆ
ಕಾಲಜ್ಞಾನದ ಕತ್ತಲ ಕೊಳದಲಿ ಕಾಲುಜಾರಿತ್ತು.

ಆ ವನದಿಂದಲೆ ತಂದುದು ಈ ಆಲದ ಸಸಿಯ
ಬಳಿಯಬಹುದೆ ನಾವು ಪರಂಪರೆಯ ಮುಖಕೆ ಮಸಿಯ?
ಅಳಿಸಬಹುದೆ ನಿನ್ನೆಯಿಂದ ಇಂದು ಬಂದ ನನ್ನಿಯ?
ಹಾಗೆಂದೇ ಇಂದು ಕೂಡ
ಮಕ್ಕಳಿರುವ ಮನೆನೆತ್ತಿಯ ಮೇಲೆ ಗೂಬೆ ಕೂಗಿದೆ
ತೆಂಗುಗರಿಯ ಮೇಲೆ ಮಂಗ ಕುಣಿದು ಲಾಗ ಹಾಕಿದೆ
ಕಣಜದಲ್ಲೆ ಹೆಗ್ಗಣ
ಅಡಿಗೆಮನೆ ಮದ್ದಿನ
ದೀಪಾವಳಿ ಷಾಪಾಗಿದೆ, ಹೊಂಚುತ್ತಿದೆ ದುರ್ದಿನ?

ಬಿದ್ದಮನೆ ಗುರುತಲ್ಲೆ ಹೊಸಮನೆಗೆ ಅಡಿಪಾಯ
ಆಗೆಯುತ್ತಿದ್ದೇವೆ;
ಹುತ್ತ ಕಂಡೊಡನೆಯೇ ಹಾವಾಗಿ
ನೀರು ಕಂಡೊಡನೆಯೇ ಹೊಳೆಯಾಗಿ
ಎತ್ತಿಟ್ಟಕಾಲ ಮುತ್ತಿಟ್ಟದರ ಮೆಟ್ಟಾಗಿ
ಹೊಟ್ಟಾಗಿ ಈ ಕೆಟ್ಟ ಹೊಟ್ಟೆ ಹೊರೆದಿದ್ದೇವೆ;
ತಿದ್ದ ಬಂದವರನ್ನು ಗುದ್ದಿ ತೆಗೆದಿದ್ದೇವೆ
ಪ್ರತಿಕ್ಷಣವು ಅದಕೆ ಕೊರಗುತ್ತಲೂ ಇದ್ದೇವೆ;
ಕಷ್ಟ ಉಳಿದರು ಕಡೆಗೆ ನಾವು ಮುಗಿಯುವೆವೆಂದು
ಕತ್ತಲೆಯನೇ ನೆಮ್ಮಿ
ನಡೆಯುತ್ತಿದ್ದೇವೆ
ನಡೆಯುತ್ತಿರುತ್ತೇವೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...