Home / ಕಥೆ / ಕಿರು ಕಥೆ / ನಾನು ನಿನ್ನನ್ನು ಪ್ರೀತಿಸುತ್ತೇನೆ

ನಾನು ನಿನ್ನನ್ನು ಪ್ರೀತಿಸುತ್ತೇನೆ

ಮೊದಲ ಬಾರಿಗೆ ಕಲೇಜಿನಲ್ಲಿ ಕಾಣಿಸಿಕೊಂಡ ಅವಳ ಕಣ್ಣುಗಳ ಬೆಡಗಿಗೆ ಎಲ್ಲ ಹುಡುಗರು ಮಾರುಹೋದರು. ಸದಾ ಹಸನ್ಮುಖಿ, ಹಿತಮಿತ ಮಾತಿನ ಆ ಹುಡುಗಿ ಸ್ವಲ್ಪ ದಿನಗಳಲ್ಲೆ ಚಿರಪರಿಚಿತಳಾದಳು. ರೂಪ, ಬುದ್ಧವಂತಿಕೆ, ಅಂತಸ್ತಿನ ದೃಷ್ಟಿಯಲ್ಲಿ ಮೇಲುಸ್ತರದಲ್ಲಿದ್ದ ಆಕೆಗೆ ಅಹಂ ಎಳ್ಳಷ್ಟು ಇರದಿರುವುದು ಅಚ್ಚರಿಯ ಸಂಗತಿಯಾಗಿತ್ತು. ಹುಡುಗಿಯರಿಗಂತೂ ಸರಿ, ಹುಡುಗರೆದುರಾದರೂ ಅವಳು ಯಾವ ಸಂಕೋಚವಿಲ್ಲದೆ ಮಾತನಾಡಿಸುವಳು. ಯಾವಾಗಲೂ ತರಗತಿಯ ಕಡೆಗೆ ಆಲಕ್ಷಿಸಿ ಲೇಡೀಸ್ ರೂಮಿನೆದುರು ಅಣಕು, ತಮಾಷೆ, ಪೊಗರಿನ ಮಾತುಗಳಿಂದ ಸಿನಿಮಾ ಹಿರೋಗಳ ಸ್ಟೈಲ್‌ನಲ್ಲಿ ಕಣ್ಣುಗಳಿಂದಲೇ ಹುಡುಗಿಯರ ಬೇಟೆಯಾಡುತ್ತಿದ್ದ ಹುಡುಗರು ಅವಳ ದೆಸೆಯಿಂದಾಗಿ ತರಗತಿಗಳಿಗೆ ಚಕ್ಕರೆ ಹೊಡೆಯುವುದನ್ನು ನಿಲ್ಲಿಸಿದ್ದರು. ಒಂದೊಂದು ಸಲ ಅವಳ ಸಲಿಗೆಯ ಮಾತುಗಳಿಂದ ಹುಡುಗರೆ ಮುಜುಗರಕ್ಕೊಳಪಡುವ ಪರಿಸ್ಥಿತಿ ನಿರ್ಮಾಣವಾಯಿತು.

ಚೆಲ್ಲು ಚೆಲ್ಲಾಗಿದ್ದ ಹುಡುಗಿ ಸಹಜವಾಗಿಯೇ ಆ ಶ್ರೀಮಂತ ಹುಡುಗನೊಂದಿಗೆ ಮಾತಾಡಿದ್ದಳು. ಸ್ಫುರದ್ರೂಪಿಯಾಗಿದ್ದ ಅವನು ಹಿಂಡುಗಟ್ಟಲೆ ಗೆಳೆಯರನ್ನು ಬೆನ್ನಿಗೆ ಕಟ್ಟಿಕೊಂಡು ಉಡಾಫೆಯಿಂದಲೇ ವತಿðಸುತ್ತಿದ್ದ. ಕ್ಲಾಸಿನಲ್ಲೂ ಅದೇ ಚಾಳಿ, ಅವನಿಂದ ಪ್ರಧ್ಯಾಪಕರಿಗೂ ತಲೆನೋವು. ಅವನ ಕೀಟಲೆ, ಪೊಗರಿನ ವರ್ತನೆ, ಲೇವಡಿ ಮಾತುಗಳಿಂದ ಹುಡುಗಿಯರು ಕಪ್ಪೆಚಿಪ್ಪಿನೊಳಗೆ ಮುದುಡಿಕೊಂಡಂತಿರುತ್ತಿದ್ದರು.

ಇಡೀ ಕ್ಯಾಂಪಸ್ಸು ಅವನನ್ನು ಸಹಿಸಿಕೊಂಡಿತ್ತು.

ಆ ಹುಡುಗಿಯ ಬಗ್ಗೆ ಅವನಿಗೆ ಮೊದಲ ನೋಟದಲ್ಲೆ ಪ್ರೀತಿ ಹುಟ್ಟಿಕೊಂಡಿತ್ತು. ಆದರೆ ಅದನ್ನು ಅವಳೆದುರು ಪ್ರಸ್ತಾಪಿಸುವ ಧಾರ್ಷ್ಟ್ಯವನ್ನು ತೋರಿಸಲಿಲ್ಲ. ಗೆಳೆಯರೊಂದಿಗೆ ಹೇಳಿಕೊಂಡಿದ್ದ. ಅವರು ಅವಳ ಮೇಲಿನ ಅವನ ಹುಚ್ಚಿನ ಕಿಚ್ಚಿಗೆ ಗಾಳಿಯೂದಿದ್ದರು. ಅವನು ಚಿತ್ತಾರದ ಕನಸುಗಳಲ್ಲಿ ಮೀಯುತ್ತ ಪೂರ್ತಿ ಅವಳ ಹಂಬಲದಲ್ಲಿ ಚಡಪಡಿಸುತ್ತಿದ್ದ. ಆಸೆ ಉಕ್ಕೇರುತ್ತಿದ್ದಂತೆ “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಒಂದು ಸಾಲಿನ ಒಕ್ಕಣಿಕೆಯ ಕಾಗದವನ್ನು ಅವಳಿಗೆ ತಲುಪಿಸಿದ.

ಆ ಹುಡುಗಿ ಮಾತ್ರ ಸಹಜವಾಗಿದ್ದಳು.

ಅವನು ಆಕಾಶಕ್ಕೆ ನೆಗೆದಿದ್ದ. ಅಂತ ಚೆಂದದ ಚೆಲುವೆಯನ್ನು ದಕ್ಕಿಸಿಕೊಂಡ ಸಂಭ್ರಮದಲ್ಲಿ ಗೆಳೆಯರು ಅವನಿಂದ ಜಬರದಸ್ತಾದ ಪಾರ್ಟಿ ಮಾಡಿಸಿದ್ದರು. ಅವರಿಬ್ಬರ ಪ್ರಣಯದ ವಿಷಯವನ್ನು ಅವರೇ ಹರಡಿ ವರ್ಣರಂಜಿತಗೊಳಿಸಿದ್ದರು. ಹುಡುಗನಿಗೆ ದಿನದ ಇಪ್ಪತ್ನಾಲ್ಕು ಗಂಟೆ ಅವಳದೇ ಧ್ಯಾನವಾಯಿತು.

ಪ್ರೀತಿಯೆಂದರೆ ಏನು? ಹೆಣ್ಣು-ಗಂಡು ತೀರ ಹತ್ತಿರ ಹತ್ತಿರ ಬರಬೇಕು. ಮನಸ್ಸು ಮನಸ್ಸು ಕೂಡಬೇಕು. ಭಾವನೆಗಳು ಎರಕಗೊಳ್ಳಬೇಕು. ಹೃದಯಗಳು ಮಾತಾಡಬೇಕು. ಜೊತೆ ಜೊತೆಯಾಗಿ ಹೋಟ್ಲು ಸಿನಿಮಾ, ಪಿಕ್‌ನಿಕ್ಕು ಪಾರ್ಕು ಒತ್ತಾಯಿಸಿದರೂ ಅವಳು ಹೊಟೇಲಿಗೆ ಬರಲಿಲ್ಲ. ಏಕಾಂತದಲ್ಲಿ ಮಾತಾಡಬೇಕೆಂದರೆ ಪಾರ್ಕಿಗೂ ಬರಲಿಲ್ಲ. ಎದುರಾದರೆ ಮಾತಾಡುವಳು. ನಗುವಳು, ಬರೆದುಕೊಳ್ಳಲು ನೋಟ್ಸ್ ಕೊಡುವಳು. ಪ್ರೀತಿಯ ವಿಷಯ ಮಾತಾಡಬೇಕೆನ್ನುವಷ್ಟರಲ್ಲಿ ಮಾಯೆಯಾಗಿ ಬಿಡುವಳು. ಅಂತರಂಗದ ವಿಚಾರವಾದರೂ ಏನು!

ಒಂದಿನ ಅವನು ಅವಳನ್ನು ಹಿಡಿದು ನಿಲ್ಲಿಸಿಯೇ ಬಿಟ್ಟ. ಎದೆ ಒಡೆದು ಕೊಳ್ಳುತ್ತಿದ್ದರೂ, ಮೈ ಬೆವರುತ್ತಿದ್ದರೂ ಧೈರ್ಯದಿಂದ “ಐ ಲವ್ ಯು” ಎಂದುಬಿಟ್ಟ. ಆಕೆ ಪಕಪಕನೆ ನಕ್ಕು ಬಿಟ್ಟಳು. “ಪ್ಲೀಸ್ ನೀವು ನಗಬೇಡಿ, ನಿಮ್ಮ ಅಭಿಪ್ರಾಯ ಹೇಳಿರಿ” ಗೋಗರೆದ ಅವನು.

“ನಾನೇಕೆ ಹೇಳಬೇಕು?”
“ನಾನು ನಿಮ್ಮನ್ನು ಪ್ರೀತಿಸುತ್ತೇನೆ.”
“ಪ್ರೀತಿಸು ಅಂತ ಯಾರು ಹೇಳಿದರು?”

ವಿಚಲಿತನಾದರೂ ಹುಡುಗ ಸಾವರಿಸಿಕೊಂಡ: “ಹೇಳಿಕೆಯಿಂದ ಪ್ರೀತಿ ಹುಟ್ಟುವುದಿಲ್ಲ. ಅದು ಹೃದಯದ ಸೆಲೆ, ನಾನು ಮನಸಾರೆ ಪ್ರೀತಿಸುತ್ತೇನೆ ಮದುವೆ ಮಾಡಿಕೊಳ್ಳುತ್ತೇನೆ” ಎಂದ.

“ಅಂದರೆ ನನ್ನ ಜೀವನವನ್ನು ಹಾಳು ಮಾಡುವ ವಿಚಾರವೋ?” ಅವನ ಮೇಲಿನ ದೃಷ್ಟಿ ಹೊರಳಿಸದೆ ಕೇಳಿದಳು ಹುಡುಗಿ.

“ನೀವು ನನ್ನನ್ನು ಪ್ರೀತಿಸುವುದಿಲ್ಲವೆ?” ಗಲಿಬಿಲಿಗೊಳಗಾದ ಹುಡುಗ.

“ಹುಡುಗಿ ಸ್ಪಷ್ಟವಾಗಿ ಹೇಳಿದಳು” “ರೀ ಮಿಸ್ಟರ್‍, ನಾನು ಕಾಲೇಜಿಗೆ ಬಂದದ್ದು ಕಲಿಯಲಿಕ್ಕೆ, ಭವಿಷ್ಯ ರೂಪಿಸಿಕೊಳ್ಳುವುದಕ್ಕೆ – ಪ್ರೀತಿ, ಪ್ರೇಮದ ಹುಡುಗಾಟಕ್ಕಲ್ಲ.”

ಹುಡುಗನ ಮುಖದಲ್ಲಿ ಭ್ರಮೆಗಳ ಗುರುತು ಒಂದೂ ಕಾಣಿಸಲಿಲ್ಲ.

*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...