Home / ಕವನ / ಕವಿತೆ / ಶ್ರೀ ಕೃಷ್ಣನ ಕಾಣಿಕೆ

ಶ್ರೀ ಕೃಷ್ಣನ ಕಾಣಿಕೆ

[ಒಂದಾನೊಂದು ದಿನ ಸುಧಾಮನ ಸಹಧರ್ಮಿಣಿ ತನ್ನ ಪತಿರಾಯನನ್ನು ಕುರಿತು ಹೀಗೆ ನುಡಿದಳು]
ಭಾಗ್ಯವನು ಬಳೆದುಕೊಂಡಿಹರು ಕೆಲ ಜನರು ಸೌ-
ಭಾಗ್ಯವನು ಸುರಿದುಕೊಂಡಿಹರು ಹಲ ಜನರು ಸೌ-
ಭಾಗೃತಿಲಕನೆ ಕೇಳು ಭಾಗ್ಯಲಕ್ಷ್ಮಿಯು ನಮ್ಮ
ಗುಡಿಸಲವ ತೊಲಗಿ ತಾನು!
ಈಗ್ಗೆ ಹೋದಳು- ನೆಲೆಯು ಹತ್ತದೀ ಬಡತನದ
ತಗ್ಗಿನೊಳಗಿಂದ ಹೊರಬರುವ ಹಾದಿಯ ಕಾಣೆ
ಮುಗ್ಗಿ ಹೋಗಿದೆ ಮನವು ತಗ್ಗಿ ಹೋಗಿದೆ ತನುವು
ನಮಗೆ ಯಾರಿಲ್ಲವೇನು?
[ಆಗ ಅಂತಃಕರಣಕ್ಕೆ ಒಳಒಳಗಿಂದೇ ಅಳುವು ಬಂದು ಸುದಾಮನು ತನ್ನ ಪತ್ನಿಗೆ ಈ ಪ್ರಕಾರ ಹೇಳಿದನು:-]
ಬಂಧುಬಳಗದ ಜನರು ಯಾರಿಲ್ಲ, ಅಣ್ಣ ತ-
ಮ್ಮಂದಿರನು ನಾನು ಹುಟ್ಟಾ ಕಾಣೆ ಮಡದಿಯೇ
ಮುಂದೆ ಕರೆವವರಿಲ್ಲ ಹಿಂದುಮುಂದಿಲ್ಲ ಹಾಯ್
ನಮಗೀಗ ಯಾವನಿಲ್ಲ!
ಇಂದು ನೆರವಿನ ನರನು ನಮಗಿಲ್ಲ ಜಗದಲ್ಲಿ
ಹಿಂದೆ ಗುರ್ವಾಶ್ರಮದೊಳಿದ್ದನೊಬ್ಬನು ಕೃಷ್ಣ
ಚೆಂದ ಚೆನ್ನಿಗ ಚೆಲುವ- ದ್ವಾರಕೆಯೊಳಿರುವಾತ-
“ಎಳೆಮನದ ಗೆಳೆಯ” ನೊಬ್ಬ!
[ಕೃಷ್ಣನಿಂದಾದರೂ ತನ್ನ ಬಡತನ ಬತ್ತಿತೆಂದು ಬಗೆದು ಸಹಧರ್ಮಿಣಿಯು “ಕೃಷ್ಣನ ಕಡೆಗೆ ಹೋಗಿ ಬರ್ರಿ” ಎಂದು ಹೇಳಿದ್ದಕ್ಕೆ ಸುದಾಮನು ಒಪ್ಪಿ ಎಲ್ಲಿಂದಲೋ ಒಪ್ಪಿಡಿ ಅವಲಕ್ಕಿಯನ್ನು ಪತ್ನಿ ತಂದು ಕೊಟ್ಟಿದ್ದನ್ನು ತೆಗೆದುಕೊಂಡು ಹೊರಟು ದ್ವಾರಕೆಗೆ ಬಂದು ತನ್ನ ಗೆಳೆಯನಿಗೆ ಹೀಗೆ ಹೇಳಿದನು:-]
ಒಪ್ಪಿಡಿಯ ತುಂಬಿರುವ ಅವಲಕ್ಕಿಯನು ತಗೋ
ಒಪ್ಪಾಗಿ ಒಪ್ಪುತಿಹ ಭಾಗ್ಯಲಕ್ಷ್ಮಿಯ ನಲ್ಲ
ಅಪ್ಪಯ್ಯ ನಿನಗೆಂದು ತಂದಿರುವೆನೀ ಒಂದೆ
ಹಿಡಿಯ ಅವಲಕ್ಕಿಯನ್ನು!
ಉಪ್ಪಿಲ್ಲ ಊಟಕ್ಕೆ ತುಪ್ಪವಿಲ್ಲವು ತುಟಿಗೆ
ಕಪ್ಪಿಟ್ಟು ಹೋಗಿರುವೆ ಮತ್ತೆ ಮೇಲಿಂದ ಮೇಲ್
ಬಪ್ಪ ಬಡತನವನ್ನು ಭಂಗಿಸೋ ಹಿಂಗಿಸೋ-
ಭಾಗ್ಯವನು ಸೂರೆಗೊಳಿಸೋ!
ಕೃಷ್ಣ ಕೊಳಲಿನ ಕೃಷ್ಣ! ಕೆನೆವಾಲ ಕೃಷ್ಣನೇ!
ಕೃಷ್ಣೆಯಾ ದೇವಕಿಯ ಸವಿಮಾವೆ-ಗಿಳಿಮಾವೆ!
ವಿಷ್ಣು ವರ್ಣಗಳುಳ್ಳ ವಿಶ್ವವನು ವ್ಯಾಪಿಸಿದ
ಭಾಗ್ಯಸ್ವರೂಪ ರೂಪ!
ನಿಷ್ಣಾತ ಯೋಗೀಂದ್ರ ಬವರದಲ್ಲಿಯ ಬಂಟ!
ಉಷ್ಣತೆಯು ಹೃದಯವನು ತುಂಬಿಹುದು ಹೃದಯದೀ
ಕೃಷ್ಣೆಯನು ಕಡೆಗೋಲ ಬೆಣ್ಣೆಯಲಿ ಸಂತೈಸಿ
ಸೊಗಸುಗೊಳಿಸೀಗ ಬೇಗ!
ನೋಯುತ್ತ ನೆರಳುವೆನು ಬೇಯುತ್ತ ಬಳಲುವೆನು
ಕಾಯವೀ ತೋಯದೊಳು ತೋಯುತ್ತ ತೊಳಲುವದು
ಕಾಯಬೇಕೆನ್ನ ಮಿತ್ರನೆ ಮೀಯಿಸೀಗ ನಿನ್ನಯ
ನನ್ನಿ-ನನ್ನಿ ಯಲ್ಲಿ!
ನೋಯುತ್ತ ಬಸಿಯುತಿಹ ಗಾಯವನ್ನಾರೈಸಿ
ಮಾಯಿಸೈ, ಸೀಯಾದ ತೋಯವನು-ಪೀಯೂಷ-
ಪ್ರಾಯವಹ ತೋಯವನು ತಾಯೀಗ ಸಾಯುವೆನು
ನೀರಡಿಕೆಸಾವಿನಿಂದ!
[ಆಗ ಶ್ರೀಕೃಷ್ಣನು ಪ್ರೇಮಾಂತಃಕರಣದಿಂದ ಗೆಳೆಯನನ್ನು ಬಿಗಿತಾಗಿ ಅಪ್ಪಿಕೊಂಡು ಇಂತೆಂದನು:-]
ಅಣ್ಣಯ್ಯ ಅಲ್ಲಯ್ಯ ಈ ಸೊಲ್ಲು ಸಲ್ಲದೈ
ಕಣ್ಣೀರುಗಳು ತುಂಬಿ ಕೋಡಿಯೊಡೆಯುವದೀಗ
ತಣ್ಣನ್ನ ಶಿಲೆಯಂತೆ ನಾನೇನು ಕೂತಿರುವದಿಲ್ಲವೋ
ಇಲ್ಲ ಇಲ್ಲ!
ನಿನ್ನನ್ನು ನಿನ್ನ ಮೊಗವನು ನೋಡಿ ಜೀವದ-
ಲ್ಲಿನ್ನು ಕಳೆ ಬಂದಿತೈ, ಮೊಗದಲ್ಲಿ ನಗೆ ಬಂತು
ಅಣ್ಣಯ್ಯ ನನ್ನದೀ ಭಾಗ್ಯವೆಲ್ಲವು ನಿನ್ನದೇ,
ನನ್ನದಿರುವದಿಲ್ಲ!
ಮೇಲೆ:-
ಕೃಷ್ಣ ನೂರೊಳಗೆ ಗೆಳೆಯನು ಇರುವ ಕಾಲದಲಿ
ಕೃಷ್ಣನೇ ಉಪಚರಿಸಿ ಕಳಿಸಿದನು ಕೊಡದೆ ಗಡ,
ಕೃಷ್ಣ ಕೊಡದದ್ದೆ ತನ್ನೂರಿಗೈತಂದ ಬಳಿಕಾಯಿತೈ
ಭಾಗ್ಯ ಸಾಕ್ಷಾತ್!
ಕೃಷ್ಣನೀಯುವ ಬೇವೆ ಮಾವಾಗಿ ಫಲಿಸುವದು!
ಕೃಷ್ಣನೀಯುವ ಕನಸೆ ನನಸಾಗಿ ಜನಿಸುವದು!
ಕೃಷ್ಣ ಕೊಡುವಂಥ ವಿಷ ಪೀಯೂಷವಾಗಿ ರುಚಿಸುವದೀಗ
ಪೃಥ್ವಿಯಲ್ಲಿ!
*****
Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...