
೧
[ಒಂದಾನೊಂದು ದಿನ ಸುಧಾಮನ ಸಹಧರ್ಮಿಣಿ ತನ್ನ ಪತಿರಾಯನನ್ನು ಕುರಿತು ಹೀಗೆ ನುಡಿದಳು]
ಭಾಗ್ಯವನು ಬಳೆದುಕೊಂಡಿಹರು ಕೆಲ ಜನರು ಸೌ-
ಭಾಗ್ಯವನು ಸುರಿದುಕೊಂಡಿಹರು ಹಲ ಜನರು ಸೌ-
ಭಾಗೃತಿಲಕನೆ ಕೇಳು ಭಾಗ್ಯಲಕ್ಷ್ಮಿಯು ನಮ್ಮ
ಗುಡಿಸಲವ ತೊಲಗಿ ತಾನು!
ಈಗ್ಗೆ ಹೋದಳು- ನೆಲೆಯು ಹತ್ತದೀ ಬಡತನದ
ತಗ್ಗಿನೊಳಗಿಂದ ಹೊರಬರುವ ಹಾದಿಯ ಕಾಣೆ
ಮುಗ್ಗಿ ಹೋಗಿದೆ ಮನವು ತಗ್ಗಿ ಹೋಗಿದೆ ತನುವು
ನಮಗೆ ಯಾರಿಲ್ಲವೇನು?
೨
[ಆಗ ಅಂತಃಕರಣಕ್ಕೆ ಒಳಒಳಗಿಂದೇ ಅಳುವು ಬಂದು ಸುದಾಮನು ತನ್ನ ಪತ್ನಿಗೆ ಈ ಪ್ರಕಾರ ಹೇಳಿದನು:-]
ಬಂಧುಬಳಗದ ಜನರು ಯಾರಿಲ್ಲ, ಅಣ್ಣ ತ-
ಮ್ಮಂದಿರನು ನಾನು ಹುಟ್ಟಾ ಕಾಣೆ ಮಡದಿಯೇ
ಮುಂದೆ ಕರೆವವರಿಲ್ಲ ಹಿಂದುಮುಂದಿಲ್ಲ ಹಾಯ್
ನಮಗೀಗ ಯಾವನಿಲ್ಲ!
ಇಂದು ನೆರವಿನ ನರನು ನಮಗಿಲ್ಲ ಜಗದಲ್ಲಿ
ಹಿಂದೆ ಗುರ್ವಾಶ್ರಮದೊಳಿದ್ದನೊಬ್ಬನು ಕೃಷ್ಣ
ಚೆಂದ ಚೆನ್ನಿಗ ಚೆಲುವ- ದ್ವಾರಕೆಯೊಳಿರುವಾತ-
“ಎಳೆಮನದ ಗೆಳೆಯ” ನೊಬ್ಬ!
[ಕೃಷ್ಣನಿಂದಾದರೂ ತನ್ನ ಬಡತನ ಬತ್ತಿತೆಂದು ಬಗೆದು ಸಹಧರ್ಮಿಣಿಯು “ಕೃಷ್ಣನ ಕಡೆಗೆ ಹೋಗಿ ಬರ್ರಿ” ಎಂದು ಹೇಳಿದ್ದಕ್ಕೆ ಸುದಾಮನು ಒಪ್ಪಿ ಎಲ್ಲಿಂದಲೋ ಒಪ್ಪಿಡಿ ಅವಲಕ್ಕಿಯನ್ನು ಪತ್ನಿ ತಂದು ಕೊಟ್ಟಿದ್ದನ್ನು ತೆಗೆದುಕೊಂಡು ಹೊರಟು ದ್ವಾರಕೆಗೆ ಬಂದು ತನ್ನ ಗೆಳೆಯನಿಗೆ ಹೀಗೆ ಹೇಳಿದನು:-]
೩
ಒಪ್ಪಿಡಿಯ ತುಂಬಿರುವ ಅವಲಕ್ಕಿಯನು ತಗೋ
ಒಪ್ಪಾಗಿ ಒಪ್ಪುತಿಹ ಭಾಗ್ಯಲಕ್ಷ್ಮಿಯ ನಲ್ಲ
ಅಪ್ಪಯ್ಯ ನಿನಗೆಂದು ತಂದಿರುವೆನೀ ಒಂದೆ
ಹಿಡಿಯ ಅವಲಕ್ಕಿಯನ್ನು!
ಉಪ್ಪಿಲ್ಲ ಊಟಕ್ಕೆ ತುಪ್ಪವಿಲ್ಲವು ತುಟಿಗೆ
ಕಪ್ಪಿಟ್ಟು ಹೋಗಿರುವೆ ಮತ್ತೆ ಮೇಲಿಂದ ಮೇಲ್
ಬಪ್ಪ ಬಡತನವನ್ನು ಭಂಗಿಸೋ ಹಿಂಗಿಸೋ-
ಭಾಗ್ಯವನು ಸೂರೆಗೊಳಿಸೋ!
೪
ಕೃಷ್ಣ ಕೊಳಲಿನ ಕೃಷ್ಣ! ಕೆನೆವಾಲ ಕೃಷ್ಣನೇ!
ಕೃಷ್ಣೆಯಾ ದೇವಕಿಯ ಸವಿಮಾವೆ-ಗಿಳಿಮಾವೆ!
ವಿಷ್ಣು ವರ್ಣಗಳುಳ್ಳ ವಿಶ್ವವನು ವ್ಯಾಪಿಸಿದ
ಭಾಗ್ಯಸ್ವರೂಪ ರೂಪ!
ನಿಷ್ಣಾತ ಯೋಗೀಂದ್ರ ಬವರದಲ್ಲಿಯ ಬಂಟ!
ಉಷ್ಣತೆಯು ಹೃದಯವನು ತುಂಬಿಹುದು ಹೃದಯದೀ
ಕೃಷ್ಣೆಯನು ಕಡೆಗೋಲ ಬೆಣ್ಣೆಯಲಿ ಸಂತೈಸಿ
ಸೊಗಸುಗೊಳಿಸೀಗ ಬೇಗ!
೫
ನೋಯುತ್ತ ನೆರಳುವೆನು ಬೇಯುತ್ತ ಬಳಲುವೆನು
ಕಾಯವೀ ತೋಯದೊಳು ತೋಯುತ್ತ ತೊಳಲುವದು
ಕಾಯಬೇಕೆನ್ನ ಮಿತ್ರನೆ ಮೀಯಿಸೀಗ ನಿನ್ನಯ
ನನ್ನಿ-ನನ್ನಿ ಯಲ್ಲಿ!
ನೋಯುತ್ತ ಬಸಿಯುತಿಹ ಗಾಯವನ್ನಾರೈಸಿ
ಮಾಯಿಸೈ, ಸೀಯಾದ ತೋಯವನು-ಪೀಯೂಷ-
ಪ್ರಾಯವಹ ತೋಯವನು ತಾಯೀಗ ಸಾಯುವೆನು
ನೀರಡಿಕೆಸಾವಿನಿಂದ!
೬
[ಆಗ ಶ್ರೀಕೃಷ್ಣನು ಪ್ರೇಮಾಂತಃಕರಣದಿಂದ ಗೆಳೆಯನನ್ನು ಬಿಗಿತಾಗಿ ಅಪ್ಪಿಕೊಂಡು ಇಂತೆಂದನು:-]
ಅಣ್ಣಯ್ಯ ಅಲ್ಲಯ್ಯ ಈ ಸೊಲ್ಲು ಸಲ್ಲದೈ
ಕಣ್ಣೀರುಗಳು ತುಂಬಿ ಕೋಡಿಯೊಡೆಯುವದೀಗ
ತಣ್ಣನ್ನ ಶಿಲೆಯಂತೆ ನಾನೇನು ಕೂತಿರುವದಿಲ್ಲವೋ
ಇಲ್ಲ ಇಲ್ಲ!
ನಿನ್ನನ್ನು ನಿನ್ನ ಮೊಗವನು ನೋಡಿ ಜೀವದ-
ಲ್ಲಿನ್ನು ಕಳೆ ಬಂದಿತೈ, ಮೊಗದಲ್ಲಿ ನಗೆ ಬಂತು
ಅಣ್ಣಯ್ಯ ನನ್ನದೀ ಭಾಗ್ಯವೆಲ್ಲವು ನಿನ್ನದೇ,
ನನ್ನದಿರುವದಿಲ್ಲ!
೭
ಮೇಲೆ:-
ಕೃಷ್ಣ ನೂರೊಳಗೆ ಗೆಳೆಯನು ಇರುವ ಕಾಲದಲಿ
ಕೃಷ್ಣನೇ ಉಪಚರಿಸಿ ಕಳಿಸಿದನು ಕೊಡದೆ ಗಡ,
ಕೃಷ್ಣ ಕೊಡದದ್ದೆ ತನ್ನೂರಿಗೈತಂದ ಬಳಿಕಾಯಿತೈ
ಭಾಗ್ಯ ಸಾಕ್ಷಾತ್!
ಕೃಷ್ಣನೀಯುವ ಬೇವೆ ಮಾವಾಗಿ ಫಲಿಸುವದು!
ಕೃಷ್ಣನೀಯುವ ಕನಸೆ ನನಸಾಗಿ ಜನಿಸುವದು!
ಕೃಷ್ಣ ಕೊಡುವಂಥ ವಿಷ ಪೀಯೂಷವಾಗಿ ರುಚಿಸುವದೀಗ
ಪೃಥ್ವಿಯಲ್ಲಿ!
*****

















