
೧
ಧೋ….ಧೋ….ಧೋ…
ಮಳೆ ಸುರಿದಿದೆ ಇಳೆಗಿಳಿದಿದೆ
ಮುಗಿಲೆಲ್ಲವು ಕರಗಿದೆ.
ನಾಡು ಕಾಡು ನೀರಾಗಿದೆ
ದಾರಿ ಕಾಣದಾಗಿದೆ;
ಜಗದ ನಗುವು ನೋವು ನಲಿವು
ಇದರ ನಾದಲೀಲೆಯಲ್ಲಿ ಏಕತಾನವಾಗಿದೆ
ಗಾಳಿ ಶೃತಿಯ ಹಿಡಿದಿದೆ.
೨
ಹಳೆಯ ಕೊಳೆತ ಕಡ್ಡಿ ಕಸವು
ನಿಂತ ನೀರು ಕೊಳಚೆ-ವಿಷವು
ಕೊಚ್ಚಿಕೊಂಡು ಹೋಗಿವೆ
ಹರಿವ ನೀರ ಸುಳಿಗೆ ಸಿಕ್ಕು ಎಲ್ಲೊ ಮಾಯವಾಗಿವೆ;
೩
ಮಳೆಯ ಘೋರ ಸೆಳಕುಗಳಿಗು
ಗಾಳಿ ಹೊಡೆತ ಬಡೆತಗಳಿಗು
ನಿನ್ನ ಗುಡಿಸಲದರಿ ಮುದುರಿ
ನೆಲವನಪ್ಪಿ ಬೀಳದಿರಲಿ
ನೊಂದ ಜೀವ ಬದುಕಲೆಂದು ನಿರ್ಧಾರವ ಮಾಡಲಿ
ಆಕೆ ಹೊತ್ತು ನಿಲ್ಲಲಿ!
೪
ಆದರೂನು ಕರೆದೆಯೇನು
ಮಹಾಪೂರ ಬಂದಿತೇನು
ಇದೋ ಈಗ ಹಾಯಿ ಹಾಕಿ ತೆಪ್ಪ ತೇಲಿ ಬಿಡುವೆನು
ತೇಲಿ ತೇಲಿ ಬರುವೆನು.
೫
ಬಾಗಿಲನ್ನು ತೆರೆದು ಬಿಡು
ಮನದ ಜಗುಲಿಯಲ್ಲಿ ಮಿಣುಕು-
ದೀಪವನ್ನು ಹಚ್ಚಿ ಇಡು
ಎದುರು ಬದುರು ಬಂದು ನಿಂದು
ಎದೆಗೆ ಎದೆಯು ಕೂಡಿದಂದು
ಮೂಕ ಮಾತಿನಿಂದ ಹೃದಯ ಪ್ರೀತಿಗೀತ ಹಾಡಲಿ
ಶೋಕಗೀತ ಮರೆಯಲಿ.
*****
















