Home / ಕವನ / ಅನುವಾದ / ರಾವುತರ ದಾಳಿ

ರಾವುತರ ದಾಳಿ

ಹರಿದಾರಿ, ಹರಿದಾರಿ,
ಹರಿದಾರಿ ಮುಂದೆ,
ಮೃತ್ಯುವಿನ ಪಂಜರಕೆ
ನುಗ್ಗಿದರು ಮುಂದೆ.
“ನುಗ್ಗಿ ಮುಂದಕೆ, ಕುದುರೆ!
ಕೊಚ್ಚಿ ಗುಂಡನು!” ಎಂದ
ಆರ್ನೂರು ರಾವುತರು
ಮೃತ್ಯುವಿನ ಪಂಜರಕೆ
ನುಗ್ಗಿದರು ಮುಂದೆ.
“ನುಗ್ಗಿ ಮುಂದಕೆ, ಕುದುರೆ!”
ಕುಗ್ಗಿದವನೊಬ್ಬುಂಟೆ?
ಯಾರೊ ತಪ್ಪಿದರೆಂದು
ಧೀರರವರರಿದೂ?
ಹೇಳುವುದಕವರಲ್ಲ,
ಕೇಳುವುದಕವರಲ್ಲ,
ಮಾಡಿ ಮಡಿವುದಕವರು-
ಆರ್ನೂರು ರಾವುತರು
ಮೃತ್ಯುವಿನ ಪಂಜರಕೆ
ನುಗ್ಗಿದರು ಹರಿದು.
ಅವರ ಬಲಗಡೆ ಗುಂಡು,
ಅವರ ಎಡಗಡೆ ಗುಂಡು,
ಅವರ ಮುಂಗಡೆ ಗುಂಡು
ಕಾರಿದುವು ಚೀರಿ.
ಸಿಡಿಮದ್ದು ಚೆರೆ ಬಿದ್ದು ,
ಜಗ್ಗದೆಯೆ ನುಗ್ಗಿದರು.
ಮೃತ್ಯುವಿನ ದಾಡೆಯಲಿ,
ನರಕದುರಿಬಾಯಿಯಲ್ಲಿ,
ಆರ್ನೂರು ರಾವುತರು
ನುಗ್ಗಿದರು ತೂರಿ.
ಬೀಸಿ, ಝಳಪಿಸಿ ಕತ್ತಿ,
ನೆಗೆದು, ಕೈ ಮೇಗೆತ್ತಿ,
ಗುಂಡಿನವರನು ಕೆತ್ತಿ,
ಕೊತ್ತಿದರು ಪಡೆಯೊತ್ತಿ-
ಲೋಕ ಬೆರಗಾಯ್ತು!
ಮದ್ದು ಹೊಗೆಯಲಿ ಮುಳುಗಿ,
ಸಾಲು ಮುರಿದರು ನುಗ್ಗಿ;
ಕಾಸಕರು, ರಷ್ಯನರು,
ಕತ್ತಿಹೊಯ್ಲಿಗೆ ಹೊರಳಿ,
ಬೆದರಿ ಧೂಳಾಯ್ತು.
ಆಗ, ಹಿಂದಿರುಗಿದರ-
ಇಲ್ಲ, ಆರ್ನೂರಿಲ್ಲ,
ಹಿಂದಿರುಗಿದವರು!
ಅವರ ಬಲಗಡೆ ಗುಂಡು,
ಅವರ ಎಡಗಡೆ ಗುಂಡು,
ಅವರ ಹಿಂಗಡೆ ಗುಂಡು,
ಕಾರಿದುವು ಚೀರಿ.
ಸಿಡಿಮದ್ದು ಚೆರೆ ಬಿದ್ದು,
ಆಳು ಕುದುರೆಗಳುರುಳಿ,
ನುಗ್ಗಿದಾ ಧೀರರಲಿ,
ಮೃತ್ಯುವಿನ ಬಸಿರಿಂದ,
ನರಕದುರಿಬಾಯಿಂದ,
ಮರಳಿ ಬಂದರು ಕೆಲರು,
ಆರ್ನೂರು ರಾವುತರು
ಅಳಿದುಳಿದ ಕೆಲರು.
ಮಾಸದವರದು ಹೆಸರು!
ಬೀಸಿ, ಏನ್ನುಗ್ಗಿದರು!
ಲೋಕ ಬೆರಗಾಯ್ತು!
ನುಗ್ಗಿ ಹೊಯ್ದುದ ಹೊಗಳು!
ಜಗ್ಗದೆದೆಗಳ ಹೊಗಳು!
ಆರ್ನೂರು ರಾವುತರ ಶೌರ್ಯ ಹೊಗಳು!
*****
TENNYSON (1809 -1892) : Charge of the Light Brigade
Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...