Home / ಕವನ / ಕವಿತೆ / ಸಂಜೆಗೆ

ಸಂಜೆಗೆ

(ಒಂದು ಪ್ರಗಾಥ)

ಹೃದಯ ಕಂಪಿಸುತಿಹುದು ಆನಂದ ದೂರ್ಮಿಯಲಿ
ತುಂಬಿ ಮೈಮನವನ್ನು ಬಂಧಿಸಿಹುದು
ಇಹುದೆ ಇಂತಹ ಚೆಲುವು ಲೋಕದಲಿ ನಾಕದಲಿ
ನಿನ್ನವೊಲು, ಶ್ಯಾಮಲೆಯೆ, ಮಾಗಿದೊಲವು
ಹರಣಗಳ ನಯನದಲಿ ಅರಳಿಸುತ ನೋಡುವೆನು.
ಕಡಲನ್ನೆ ಕುಡಿಯುವೊಲು ದಿಟ್ಟಿಸುವೆನು.

ಹಗಲಿರುಳು ತೆರೆ ಸರಿಸಿ ಬಂದೆ ಮಂಥರೆ, ಮಧುರೆ
ನಿಮಿಷಾರ್ಧವೇ ನಿಂತು ನಡುವೆ ಮರೆಗೆ
ಆದರೆಲ್ಲೆಡೆ ನೀನು ಮಂತ್ರ ಮೌಕ್ತಿಕ ಜಲವ
ತೂರುತಿರೆ ದೇಶ ದಿಶೆ ಹೂ ಹಾಸಿಗೆ.
ಜರೆಯ ಮರೆಯಿತು ಗಿರಿಯು ಹೆರೆಯತಳೆದಿತು ತಿರೆಯು
ನನ್ನ ಕರಳೂ ಅರಳ ಗಮಗಮಿಸಿತು.

ಸ್ವರ್ಗಲೋಕದ ಮಾರ್ಗ ದುರ್ಗಮವೆ ಈ ಕ್ಷಣದಿ
ನಾಕವೇ ನಗುತಿರಲು ನಿನ್ನುಡಿಯಲಿ
ಚೆಲುವಿನಾ ಬಲೆಯಾಗಿ ಒಲವಿನಾ ಸೆಲೆಯಾಗಿ
ಮುಣ್ಣಿಗೂ ಬಣ್ಣನೆಯ ಲೀಲೆ ದೋರೆ
ನೆಲದಿ ನೆಲೆಯಾಗಿರುವ ನನ್ನ ನನ್ನಿಗಳೆಲ್ಲ
ನಿನ್ನ ತೇಜೋರಥದಿ ಸಾಗುತಿಹವು.

ಬಲ್ಲೆಯಾ ನನ್ನೆದೆಯ ಏಕತಾರಿಯ ಮೇಲೆ
ಅಸೆಮಿಡಿಯುವ ಭಗ್ನಗೀತಗಳನು
ಮನದ ಮಂಗಲವನ್ನು ಮೃತಿಗೊಳಿಸಿ ಜೀವನದ
ಹಸಿವೆಯನೆ ಬತ್ತಿಸುವ ರಾಗಗಳನು.
ಚೆಲುವಾಗಿ ಚಣವರಳಿ ಅಳಿದ ನನ್ನೊಲವಿನಲಿ
ನೆನಹು ನೋವಿಗೆ ನೀರನುಣಿಸುತಿಹುದು.

ಬಾನ್ನೆಲದ ಬೇಟಕ್ಕೆ ಬೆಳೆದ ಸಂಧ್ಯಾ ಕುವರಿ
ದಿನದಗ್ನಿತಪ ಹೂತ ಪುಣ್ಯ ನೀನು
ನೋವು ನನೆಕೊನೆಯೇರಿ ನಲಿವಾಯಿತೆನ್ನುವೊಲು
ಬಾಂಬಸಿರ ಕಿಚ್ಚಿ ನಿಂದೆದ್ದೆ ನೀನು.
ಪಡುವಣದ ಮಡುವಿನಲಿ ನೂರೆಸಳನೈದಿಲೆಯು
ಅರಳಿದೊಲು ಹರಿಸಿರುವೆ ಕಾಂತಿಯನ್ನು

ಸಾಂಧ್ಯ ಸುಂದರಿ ನಿನ್ನ ಸೊಬಗಿನಾರಾಧನೆಗೆ
ನನ್ನ ಮನವೇ ಬಾಗಿ ನಿಂತಿರುವುದು
ಕೋಟಲೆಯ ಕದಡನ್ನು ತಿಳಿದು ಪಾವನವಾಗಿ
ಆತುರದಿ ಕಲ್ಯಾಣ ಬಯಸುತಿಹುದು.
ಸೋತೆದೆಯ ಸರಸಿಯಲಿ ಅರಳಿರುವುದರವಿಂದ
ಶಾಂತಿಯಲಿ ತೋಷವನು ತಳೆದಿರುವುದು.

ಮರೆಯಾದೆಯಾ ದೇವಿ! ಮನವು ಮುಕುಲಿತವಾಯ್ತು
ತಿರೆಯು ಕಣ್ಣಿಂಗಿದೊಲು ಮುಗ್ಗುರಿಸಿತ್ತು.
ಆದರೂ ನಿಮಿಷದಲಿ ಜೀವನವನರಳಿಸಿದ
ನಿನ್ನ ಪ್ರೀತಿಯ ರೀತಿ ಅನೃತವೆಂತು?
ವಿಲಯ ತಾಳಲಯಕ್ಕೆ ಕುಣಿವ ಬಾಳಿನ ಕತೆಗೆ
ಅಮೃತ ಗತದ ರಸವು ತುಂಬಿಬಂತು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...