Home / ಕವನ / ಅನುವಾದ / ಪಕ್ಷಿತೀರ್ಥ

ಪಕ್ಷಿತೀರ್ಥ

ಮೂಲ: ಮೋತಿಲಾಲ್ ಜೋತ್ವಾನಿ (ಸಿಂಧಿ ಕವಿ)

ದಕ್ಷಿಣ ಭಾರತದಲ್ಲಿ ಚೆಂಗಲ್‌ಪೇಟೆ, ಅಲ್ಲಿ
ತಿರುಕ್ಕುಳಕ್ಕುಂಡ್ರಂ ಎಂಬ ಪುಟ್ಟ ಊರಲ್ಲಿ
ಪ್ರಸಿದ್ಧವಾಗಿದೆ ಒಂದು ಬೆಟ್ಟದಲ್ಲಿನ ಗುಡಿ;
ದಿನವೂ ಮಧ್ಯಾಹ್ನದಲ್ಲಿ
ಗೊತ್ತಾದ ಹೊತ್ತಿನಲ್ಲಿ
ಇಳಿಯುತ್ತವೆ ಜೋಡಿ ಹಕ್ಕಿ
ಆ ದೇವಾಲಯದ ನೆತ್ತಿಯಲ್ಲಿ

ದೇವಾಲಯದ ಮುಂದೆ ಭಾರೀ ಜನಸ್ತೋಮ.
ಗಂಭೀರ ಗತಿಯಲ್ಲಿ ನಡೆದು ಬಂದರೆ ಹಕ್ಕಿ
ದಾರಿಬಿಡುವರು ಮಂದಿ ಹಿಂದೆ ಸರಿದು,
ಕಾದಿರುವ ಪೂಜಾರಿ ಸಾಷ್ಟಾಂಗ ಎರಗುವನು
ಭಯಭಕ್ತಿಯಿಂದ ಅವುಗಳೆದುರು.
ನಡೆಯುವುದು ಶಿವಪೂಜೆ ಗಂಟೆ ಬಡಿದು
ನಗಾರಿ ಹೊಡೆದು.

ಸಿಹಿ ಹುಗ್ಗಿ ನೈವೇದ್ಯ ಶಿವಮೂರ್ತಿಗೆ
ಬಡಿಸುವನು ಪೂಜಾರಿ ಹಕ್ಕಿಗಳಿಗೆ
ಬಟ್ಟಲು ತುಂಬ ಪ್ರಸಾದ ಹೊಟ್ಟೆ ತುಂಬ ತಿಂದು
ಮತ್ತೆ ಜಿಗಿವುವು ಹಕ್ಕಿ ಗಾಳಿಯಲ್ಲಿ,
ಸುತ್ತುವುವು ಮೂರು ಸಲ ಗುಡಿ ಶಿಖರವನ್ನು
ಬಿಚ್ಚಿ ರೆಕ್ಕೆಯ ಧೀರ ಠೀವಿಯಲ್ಲಿ.
ನೀಲಾಗಸದ ಕೆಳಗೆ ಬಿಳಿ ಹಾಯಿಗಳ ಜೋಡಿ
ಚೆಲುವು ಪ್ರೀತಿಗೆ ಕೂಡಿ ಕಣ್ಣಮೋಡಿ,
ಎಲ್ಲಿಂದ ಬರುವುವೋ ಎಲ್ಲಿ ಸಾಗುವುವೋ
ಯಾರೂ ತಿಳಿಯರು ಇದರ ಗೂಢವನ್ನು
ಜನ ಹೇಳುವರು ಒಂದು ಐತಿಹ್ಯವನ್ನು.
ಅರುಣೋದಯದ ವೇಳೆ ಹಿಮಾಲಯದ ತಡಿಯಿಂದ
ಹೊರಡುವುವು ಹಕ್ಕಿ ಗಿರಿಗೆ ನಮಿಸಿ,
ದಕ್ಷಿಣಕ್ಕೆ ಹಾಯುತ್ತ ಕಾಶಿಯನ್ನು ಸೇರಿ
ಗಂಗೆಯಲಿ ಮೀಯುವುದು, ಮತ್ತೆ ಹಾರಿ
ಈ ಗುಡಿಗೆ ಬಂದು ನೈವೇದ್ಯ ಪಡೆದು
ತ್ರಿಪ್ರದಕ್ಷಿಣೆ ಸಲಿಸಿ ಶಿವಮೂರ್ತಿಗೆ
ಸಾಗುವುವು ಮುಂದೆ ರಾಮೇಶ್ವರಕ್ಕೆ
ಅಲ್ಲಿ ಸಂಧ್ಯೆಯನ್ನು ಆಚರಿಸಲಿಕ್ಕೆ
*****

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...