Home / ಕವನ / ಕವಿತೆ / ಕೋಗಿಲೆ

ಕೋಗಿಲೆ

ಬಾರೆಲೆ ಕೋಗಿಲೆಯುಲಿಯುತ ಬನದೊಳು
ತಾರೆಲೆ ಮೋದವ ಮೇದಿನಿಗೆ
ಹಾಡೆಲೆ ಬಹುವಿಧ ರಾಗದೆ ನರರನು
ತೇಲಿಸಿ ಕುಣಿಸೆಲೆ ಲೀಲೆಮಿಗೆ
ಕುಡಿಗೊನರೆಲ್ಲವು ಗಿಡಗಳ ಮಡಲೊಳು
ಬಿಡದಲೆ ಕಾಣುವೆ ಕೋಗಿಲೆಯೆ
ತಡವನು ಮಾಡದೆ ಒಡನೆಯೆ ನಯನುಡಿ
ಬೆಡಗನು ಬಿಡಿಸಲೆ ಬಿಂಕದಲಿ
ಬೇಸಿಗೆ ಕಾಲನು ನಲವಿಂದಿಡುತಿದೆ
ಮಾಗಿಯು ಮುಗ್ಗುತ ಮುಡಿಯುತಿದೆ
“ಕುವೋಽಕುವೋs” ಸವಿದನಿ ಸೊದೆಯನು
ಬೀರುತ ಬಾರೈ‌ ಕೋಗಿಲೆಯೆ
ಕೇಳಿದೆ ಕೇಳಿದೆ ಕೆಲಬಲಕುಲಿಯುವ
“ಕೂಽವೊ ಕೂಽವೊ” ಮೆಲುದನಿಯ
ವಸಂತ ಸಮಯನ್ನು ಸಮನಿಸಿದೊಸಗೆಯ
ವಸುಮತಿ ದಿಶೆಶೆಗುಸಿರುತಿದೆ
ಏನಿದು ಗಾನಮೊ ಸುಮನೋಹರಮೊ !
ರಸಋಷಿರಸನೆಯೊಳೊಸರುವರಸಮೊ !
ನಿಶೀಥ ಸಮಯದ ನಿಶಾಂತ ಸನಮೊ !
ವಸುಮತಿ ದೇವಿಯ ಸುಗ್ಗಿಯ ಸೊಗಮೊ !
ವಸಂತ ರಮಣಿಯ ನಿನದದ ನಯಮೊ !
ರತಿಯುತ ಸತಿಮಣಿ ಸುಸಿಲಿನ ಸನಮೊ !
ಪಸುಳೆಯ ಮುದ್ದಿನ ಮಾತಿನ ಮುದಮೊ !!
ಕಾಣುವೆ ಕೇಳುವೆ ಕೆಲಬಲದಲ್ಲಿ
ಕುಣಿಕುಣಿದಾಡುವ ತಣಿನೆಳಲಲ್ಲಿ
ಚಲುವಿನ ಮೃದುತಮ ಮನಸಿರಿಯಲ್ಲಿ
ಬಳಲಿಕೆ ಬಾರದ ತೊಲಿಕೆಯಲ್ಲಿ
ತಿಳಿಯದಲಂಪಿನ ಮೆಲುದನಿಯಲ್ಲಿ
ತಿಳಿಗೊಳದಲಂಪಿನ ಪರಿಮಳದಲ್ಲಿ
ಮುಳಗುವೆ ಸಂದದ ಸಂತಸದಲ್ಲಿ
ನುಡಿತಡೆಬಿಡುಗಡೆ ಪಡೆಯುವ ಸಮಯದೆ
ನುಡಿಯುವ ನುಡಿಯನುಕರಿಸದಿಹೆ
“ಕುವೊ ಕುವೊ ಕರ್ರೇ” ಎನ್ನುತ ಸಾರಲು
ನಾಡಿನ ಬಿಡುಗಡೆ ಕಾಣದಿಹೆ
ಕವಿಗಳ ಕಣ್ಣೊಳು ಕುಣಿಕುಣಿದಲೆಯುವ
ಮಾವಿನ ತಳಿರೊಳೆ ತಳ್ತಿರದೆ
ತರುಗಳ ಭೇದವ ಹೃದಯದೆ ತಾರದೆ
ಚಲುವಿನ ತಳಿರನು ಮೆಲುತಿರುವೆ
ಬೇವಿನ ಕಿಸಲಯ ಹಸುರೆಲೆ ಬೀಡೊಳು
ಮಂಚದ ಮೇಲೆ ಮಲಗಿರಲು
ಬೆಳಗಿನ ಗಳಿಗೆಯೊಳುಲಿಯುತ ಮೆಲುದನಿ
ತಲ್ಪದೆ ತಲೆಯನು ತೊನೆಸುತಿಹೆ
ಸವಿದನಿಯೆಸಕವನೊಸೆದೊಸೆದಾಲಿಸೆ
ಬಾಲ್ಯದೆ ತೇಲಿಸಿ ಕುಣಿಸುತಿಹೆ
ಶಿಶುತನದೊಸಗೆಯ ಹೊಸದಾಗೇಳಿಸಿ
ಬಿಸಿಬಿಸಿಯುಸಿರನು ಬಿಡಿಸುತಿಹೆ
೧೦
ತಾಯಿಯ ತಾಯ್ನುಡಿ ತಂದೆಯ ತನಿನುಡಿ
ಕೋಗಿಲೆ ಬಗ್ಗಣೆ ಹಾರೈಸಿ
ಕುಣಿಯುತ ಕುಲುಕುಲು ನಗುತಿಹ ದಿನಗಳ
ನೆನಪೇ ನೋವಿನ ಸೀಮೆಯಲೆ
೧೧
ದನಿಯನು ಬದಲಿಸಿ ಪದುಳದೆ ಪಾಡುವ
ಹದನವ ತಲೆಯಲಿ ತೂಗುತಿರೆ
ಚದುರನು ಜಗದೊಳು ಜನರುಚಿಯರಿಯುತ
ಬದಲಿಪ ನಡೆನುಡಿ ನಟಿಸುತಿಹೆ
೧೨
ಬಾನೊಳು ಮುನಿದಿರುವಿನಿಯಳ ಬೆನ್ನೊಳು
ಪ್ರಣಯದ ತನಿಸೊದೆ ಸೂಸುತಲಿ
ಓಪನು ಓಪಳ ಕಳೆಯನು ಕೇಳುತ
ತರುಗಳ ಬಳಸುತ ತೇಲುತಿರೆ
೧೩
ಸ್ಮೃತಿಪಥಕೇಳುವ ಮುನಿದಿಹ ನಲ್ಲೆಯ
ಚಿತ್ರವ ರೂಪಿಸಿ ನಲಿಸುತಿಹೆ
ನಲ್ಲನ ನಲ್ಲೆಯ ಲಲ್ಲೆಯ ಸೊಲ್ಲಿನ
ಮಲುದನಿ ಸೊಂಪನು ಸೂಸುತಿಹೆ
೧೪
ಕಾಡಿಗೆ ಕಪ್ಪಿನ ಮೋಡದ ಬಣ್ಣವ
ಬರಸೆಳೆದಾಡುವ ಒಡಲಿಂದೆ
ಮೂಡುವ ನಯನುಡಿ ಗಾಡಿಯ ನೋಡಲು
ಪೊಡವಿಯ ಮೌಢ್ಯದೆ ಕೆಡಹುತಿಹೆ
೧೫
ಪುಚ್ಚವನೇಳಿಸಿ ಬೀಳಿಸಿ ಕಲೆವುದ
ನೊಚ್ಚರೆಗಂಗಳು ನೋಡುತಿರೆ
ಒನಪಿನ ಉಯ್ಯಲೆಯಾಂತಿಹ ಭುವನದೆ
ಕುಳಿತಿಹ ದೇವನ ನಾದಮಿದೊ
೧೬
ಪೊಡವಿಯೊಳಡಗಿಹ ಶಕುನಿಯ ಸೃಷ್ಟಿಯ
ದಿಟ್ಟಿಸಿ ನೋಡಲು ನುಡಿಗಳನು
ತರತಮಭಾವದೆ ಕಾಲದೆ ಕಾಲದೆ
ಕಲೆಯುತ ಕೆಲಬಲ ಕಲೆತಿಹವು
೧೭
ನಾಕಾಧೀಶನ ಗಮನವನೆಣಿಸದೆ
ತುಂಬುರನೆಂಬುವ ಕಿನ್ನರನು
ವೀಣೆಯ ಗಾನದ ನಾದದೆ ನಾಂದಿರೆ
ಶಾಪವು ಪಿಕವನು ರೂಪಿಸಿತೊ
೧೮
ಶಾಪವಿಮೋಚನೆ ಯಾಚಿಸಿ ಕೇಳದೆ
ಶೋಕವ ಮಾಡದೆ ಭೂತಲದೆ
ಕೋಗಿಲೆಯಾಗಿರೆ ಮಾಗಿಯ ಬೇಟಿಗ
ನೀಗದ ನಿಡುಸರ ತುಡುಕಿಹನೊ
೧೯
ವರ್ಷಾಕಾಲದ ಸೆರೆ ಪಿರಿದಲ್ತೈ
ಎಂದಾದರು ಪದ ಪಾಡುತಿಹೆ
ಸಂದಿದ ಮಾತನು ಹೊಂದಿಸಿ ಹಂಬಲ
ಮಾಡುವವನುಚಿತವನ್ನುತಿಹೆ
೨೦
ಕಾರಿನ ಕಾಲದೆ ಕೋಗಿಲೆಯುಲಿಯನು
ಕೇಳುತ ಬಂದೆನು ಕೆಲವುಕಡೆ
ರಾಗದೆ ರಾಗವ ಕೂಗುತ ಕೂಗುವ
ವೇಗಕೆ ಬೀಗವು ಬೀಳುತಿದೆ
೨೧
ವಸಂತಸಮಯದ ಸವಿದನಿಯೆಸಕವ
ವಸುಮತಿಗೂಡಿಸಿ ನುಡಿಸದಿದೆ
ನಿಶೆಯೊಳು ದಿನದೊಳು ಕೇಳಿದ ಕಿವಿಯಾ
ಸುಖವದು ಸಾರಿತು ದೆಸೆದೆಸೆಗೆ
೨೨
ಕುಗ್ಗಿದ ಕಂಠದೆ “ಕುವೊ ಕುವೊ” ಎನ್ನುವ
ಹಿಗ್ಗದ ಕೂಗನು ಕೇಳುತಿಹೆ
ಸಗ್ಗದ ಸುಖದಾ ಸೊದೆಯನು ಸವಿದಿಹ
ಹಿಗ್ಗಿದ ಮನವದು ಮುದುಡುತಿದೆ
೨೩
ಜಗದೊಳು ಜೀವಿಗೆ ಸುಖದುಃಖಂಗಳು
ಬಿಡದಿಹ ಕರ್ಮವು ಎನುತಿರುವೆ
ಮಿಗೆ ಸಮ ಭಾವನ ತಳೆಯುತ ಕಳೆವುದು
ಲೋಕದೆ ಮೇಲೆಂದೆನುತಿರುವೆ
*****
Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...