Home / ಕವನ / ಕವಿತೆ / ಓಡಿ ಬಾ

ಓಡಿ ಬಾ

ಕ್ರಾಂತಿ ಕಂದ
ನಿನ್ನ ಅಂದ
ಕಾಣಲೆಂದ
ಕವಿಗೆ ಬಂಧ
ಮುಕ್ತಿ ನೀಡು ಬಾ

ನಗೆಗಡಲಲಿ ನಲಿದು ಬಾ
ಸುಳಿಯೊಡಲಲಿ ಸುಳಿದು ಬಾ
ಮುಗಿಲಲೆಯಲಿ ಮುಳಿದು ಬಾ-ಓಡಿ ಬಾ ||

ಅಂಧಕಾರದಲ್ಲಿ ಬಂದು
ಮುಗಿಲಮಡಿಲಿನಲ್ಲಿ ನಿಂದು
ತಂಬೆಳಕನು ತಂದು ತಂದು
ಎಳೆಯೆಳೆಯಲಿ ಹರಡುವಂತೆ
ಬಾನಿನಲ್ಲಿ ಹೊಳೆವಸಂತೆ ಬಾ….

ಜೀವನದಿಂದುಕ್ಕಿ ಉಕ್ಕಿ
ಸಾವಕಡಲ ಎಣೆಯ ಮಿಕ್ಕಿ
ನೋವನೆಲ್ಲ ಸೆದೆಯನಿಕ್ಕಿ ಬಾ….

ಜೀವನದಲಿ ಸಾವಿನಲ್ಲಿ
ಕನಸಿನಲ್ಲಿ ನನಸಿನಲ್ಲಿ
ಸಪ್ತಜಗಗಳೊಡಲಿನಲ್ಲಿ
ಹರಿಯುತಿರುವ ಹೊನಲೆ ಬಾ
ಕಂದ ಕರೆಯುತಿರುವೆ ಬಾ….

ಗುಡುಗು ಗುಡುಗಿ ಸಿಡಿಲು ಸಿಡಿದು
ವಿಶ್ವಕರ್ಮನೆದೆಯನೊಡೆದು
ಭೂಗರ್ಭದ ಶಾಂತಿ ಕಡೆದು
ಜೀವತಂತಿ ಮಿಡಿದು ಮಿಡಿದು
ಹೊಸ ಜಗವನು ಸೃಜಿಸು ಬಾ
ಓ ಓಡಿಬಾ….

ಕಾವಿಲ್ಲದೆ ಜೀವವೆಲ್ಲಿ
ಕ್ರಾಂತಿ ಕಾವೆ ಬಾ
ನೋವಿಲ್ಲದೆ ಕಾವುದೆಲ್ಲಿ
ನೋವ ನುಡಿಯೆ ಬಾ
ಅಳಿವಿಲ್ಲದೆ ಉಳಿವು ಎಲ್ಲಿ
ಅಳಿವಿನುಳುಮೆ ಬಾ….

ಜೀವ ಸಂಗ್ರಾಮದಲ್ಲಿ
ಬಾಳಿನಿರುಳ ರಂಗದಲ್ಲಿ
ಸುಳಿಗಾಳಿಯ ಮಡುವಿನಲ್ಲಿ
ಸುಳಿಸುಳಿಯುತ ಬಾ
ಸುಖಸೃಜಿಸುವ ಬಾ….

ಬಾಳಬಯಲ ಬಳಸಿ ಸುತ್ತ
ಆಳುತಿರುವ ಗೋಳನತ್ತ
ಬೀಳುಗೊಳಿಸಿ ಅತ್ತ ಇತ್ತ
ನಗೆ ಹೊನಲನು ಹರುಡು ಬಾ

ಸುಖದ ಸುಗ್ಗಿ
ಬೆಳೆದು ಅಳೆದು
ಜೀವ ಹುಗ್ಗಿ
ಅಳೆದು ಅಳೆದು
ಎಲ್ಲ ಚೆಲ್ಲು ಬಾ
ಓ!

ಕ್ರಾಂತಿ ಕಂದ
ನಿನ್ನ ಅಂದ
ಕಾಣ ಲೆಂದ
ಕವಿಗೆ ಬಂಧ
ಮುಕ್ತಿ ನೀಡು ಬಾ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...