ಕರೆ

ಇವನು
ಸಂತೆಯಲ್ಲಿ ವ್ಯಾಪಾರವಿಲ್ಲದೆ ಚಿಂತಿತನಾದ
ಬದುಕಿನ ತದುಕುವಿಗೆ ಮೈಗೊಟ್ಟ
ಬವಣೆಯ ಭಾರಕ್ಕೆ ಬೆಂಬಾಗಿದ
ದುರ್ವಾಸನೆಗಳಿಂದುಸುರು ಕಟ್ಟಿದ
ಪಾಶಗಳಿಂದ ಹೆಡೆಮುರಿ ಕಟ್ಟಿಸಿಕೊಂಡ
ದಾಸ್ಯದೊತ್ತಾಯದ ಜೀತಕ್ಕೆ ಹೆಗಲನಿತ್ತ
ಸ್ವಾತಂತ್ರ್ಯ ಸಂಕೋಲೆಗೆ ಕಾಲನಿತ್ತ
ನಾಯಿ ನರಿ ಗೂಬೆ ಗೋರಿಲ್ಲಾಗಳ
ಎಳೆದಾಟಕ್ಕೆ ನಜ್ಜು ಗೊಜ್ಜಾದ
ಮೀಸಲಡುಗೆಯ ಹಡಬೆನಾಯಿಗಿಕ್ಕಿ ಬಿಕ್ಕಿದ
ಹಣದೊಡನಾಡಿ ಹಾಣಾಹಣಿ ಹೆಣವಾದ
ಕಾಮನ ಕಣ್ಮುಚ್ಚಾಲೆಯಲ್ಲಿ ಕಣ್ಕಟ್ಟಿ
ಗೋಡೆ ಗೋಡೆ ಹಾಯ್ದು ಗಟಾರಕ್ಕೆ ಬಿದ್ದ
ಭೂತವು ಬೆಂಬತ್ತಿ ಬೇತಾಳವಾದಾಗ ತತ್ತಿಹಾಕಿದ
ನರನಾಡಿಗಳೆಲ್ಲ ಇರುಳೆಲ್ಲ ನರಳಿ ರೋಧಿಸಿದರೂ
ಹಗಲ ಹಗರಣದ ಹಡಬಿಟ್ಟಿ ಬಟ್ಟೆಗಳಲ್ಲಿ
ಮೈತೂರಿಸಿಕೊಂಡ ತನ್ನ ತಾ ಕಳಕೊಂಡ
ಹಲವಾರು ಹೆಜ್ಜೆಗಳಲ್ಲೇ ನಡೆದು
ಎಡವಿ‌ಎಡವಿ ದಾರಿ ತಪ್ಪಿದ
ಕೆಲವರು ತೋರಿಸಿದಲ್ಲಿ ತೆವಳಿ ಬವಳಿಬಿದ್ದ
ಒಲವಿನ ನೆಲೆಗಾಣದೆ ನೆಲುವಿಗೆ ಹಾರಿಹಾರಿ
ನೆಲಕಂಡು ನೊಂದು ಅವಡುಗಚ್ಚಿದ
ಸಲ್ಲದ ಸಿಂಗಾರಕ್ಕೆ ಒಲ್ಲದೆ ಅಣಿಯಾಗಿ
ಹೂಮುಡಿದು ಎಣ್ಣೆಯುರಿಸಿ ಕಾದೂಕಾದೂ
ಗಂಡ ಬಾರದೆ ಕಂಗಾಲಾದವಳಂತಾದ
ಅರ್ಥವಿಲ್ಲದ ಮಂತ್ರವೂದಿ ಅನರ್ಥದ ಹೊಗೆ‌ಎಬ್ಬಿಸಿ
ತತ್ವವಿಲ್ಲದ ತಂತ್ರದಲ್ಲಿ ತಂತಿಯಿಲ್ಲದ ತಂಬೂರಿ ಮೀಟಿದ
ದಿಕ್ಕೆಳೆದ ಕಡೆ ನಡೆದು ದಿಕ್ಕೆಟ್ಟ
ಜೀವನವು ಸಾವಿಗಿಂತ ಕಡೆಯಾದಾಗ
ಮನೆ ಮಸಣದಲ್ಲೋ ಗುಡ್ಡ ಗುಡಿಯಲ್ಲೋ
ಹೊಲ ಹಾದಿಯಲ್ಲೋ ನೆಲಜಲದಲ್ಲೋ
ಕೊನೆಗೊಮ್ಮೆ ಒಳಗಿನಾಳದಿಂದ
ಅಖಂಡ ಗೂಢಗರ್ಭಮೂಲದಿಂದ
ಕರೆಯೊಂದು ಕೇಳಿ ಬಂತು
ಈ ಕರೆಗಳಿಗೆ ಎಲ್ಲರೂ ಕಿವಿದೆರೆದಿದ್ದರೆ
ಇವನು ಕಿವುಡಾಗಿದ್ದ
ಆ ಕರೆಗೆಲ್ಲರೂ ಕಿವುಡಾಗಿದ್ದರೆ
ಇವನು ಕಿವಿದೆರೆದಿದ್ದ ಕಾಣದಿದ್ದುದಕೆ ಕಣ್ತೆರೆದಿದ್ದ
(೨೩-೪-೭೪)
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...