Home / ಕವನ / ಕೋಲಾಟ / ಸುಗ್ಗಿ ಪದ – ಜಾಗಡಿ ಪದ

ಸುಗ್ಗಿ ಪದ – ಜಾಗಡಿ ಪದ

ಅತಾಳ ಪಾತಾಳ ಸಾತಾಳ ರಸತಾಳ
ಭೂತಾಳದೊಳಗೊಂದು ಶಶಿ ಹುಟ್ಟಿ ಕೋಲೇ || ೧ ||

ಭೂತಾಳದೊಳಗೊಂದು ಶಶಿ ಹುಟ್ಟಿ
ಪಾತಾಳಕೆ ಬೇರೂ ಜಿಗಿದಾವೂ ಕೋಲೇ || ೨ ||

ಪಾತಾಳಕೆ ಬೇರೂ ಜಿಗಿದಾವಾ ಶಶಿಯಲ್ಲಿ
ಆಕಾಶಕೆ ಸೈವಾಗಿ ನೆಗುದಾವೇ ಕೋಲೇ || ೩ ||

ಆಕಾಶಕೆ ಸೈವಾಗಿ ನೆಗುದೀತಾ ಶಶೀ
ವೃಕ್ಷವೆಂಬ ಹೆಸರೂ ಬಂದೀತು ಕೋಲೇ || ೪ ||

ವೃಕ್ಷವೆಂಬ ಹೆಸರೂ ಬಂದೀತಾ ಶಶೀಗೇ
ಕಾಯಿ ಹಣ್ಣಾಗಿ ಬೆಳುಗೀತು ಕೋಲೇ || ೫ ||

ಕಾಯಿ ಹಣ್ಣಾಗಿ ಬೆಳುಗಿತಾ ವೃಕ್ಷಕ್ಕೆ
ನೂರ್ವೊಂದು ಕಪಿಗಳು ಯೆರುಗಾವೆ ಕೋಲೇ || ೬ ||

ನೂರ್ವೊಂದು ಕಪಿಗಳು ಯೆರುಗಾವಾ ವೃಕ್ಷಕ್ಕೆ
ಭೂಮೀಗ್ವೊಂದು ಹೆಗಲೂ ಯೆರುಗಾವೆ ಕೋಲೇ || ೭ ||

ಭೂಮೀಗ್ವೊಂದು ಹೆಗಲೂ ಯೆರುಗಾವಾ ವೃಕ್ಷಕ್ಕೆ
ಆಚೇರಿ ತಿಮ್ಮಣ್ಣ ಕಡುತಂದಾ ಕೋಲೇ || ೮ ||

ಆಚೇರಿ ತಿಮ್ಮಣ್ಣ ಕಡುತಂದಾ ಹೆಗಲಾ
ಗುಡುಗಾರ ಬೊಮ್ಮಣ್ಣ ಪಡತಿಕೆತ್ತಿದ ಕೋಲೇ || ೯ ||

ಪಡತಿಕೆತ್ತಿ ಬೆಳಗಿಟ್ಟ ಕೋಲಿಗೆ
ಹೊನೆ ಮಾಣ ದೇವ್ರ ಮುಂದೆ ಮಡುಗಿದರು ಕೋಲೇ || ೧೦ ||

ಹೊನೆ ಮಾಣ ದೇವ್ರ ಮುಂದೆ ಮಡಗೀದಾ ಕೋಲಿಗೆ
ಗಂದಾ ಹೂವನ್ನೆ ಪೂಸಿದರು ಕೋಲೇ || ೧೧ ||

ಗಂದಾ ಹೂವನ್ನೆ ಪೂಸಿದಾ ಕೋಲಿಗೆ
ಹಣ್ಣುವೀಳ್ಯಾವಾ ಇಟ್ಟಿದರು ಕೋಲೇ || ೧೨ ||

ಹಣ್ಣುವೀಳ್ಯಾವಾ ಇಟ್ಟಿದಾ ಕೋಲಿಗೆ
ಕಾಯೊಡದಿ ಕಯ್ಯಾ ಮುಗಿದಾರೂ ಕೋಲೇ || ೧೩ ||

ಕಾಯೊಡದಿ ಕಯ್ಯಾ ಮುಗಿದಾರಾ ಕೋಲಿಗೆ
ಮಂಗಳಾರತಿಯಾ ಬೆಳಗಿದರು ಕೋಲೇ || ೧೪ ||

ಮಲವಯ್ಯನೆಂಬವ ಮಾದೊಡ್ ಶೂರ
ಮಲವಯ್ಯನೆಂಬವ ಮಾದೊಡ್ ಶೂರನು ಕೋಲೇ || ೧೫ ||

ಉಟ್ಟಾ ಮೈಲಿಗೆಯಾ ತೆಗೆಯನು ತೊಳೆಯಾನು ಮಲವಯ್ಯ
ಉಂಡಾ ಯಂಳ್ಳಕೆ ಅಂಜನು ಕೋಲೇ || ೧೬ ||

ಮಲವಯ್ಯಾ ನೆಂಬವ ಮರಕೆ ಹಬ್ಬಿದ ಬಳ್ಳೀ
ಎಂದೀಗೂ ಬಳ್ಳಿ ಹರಿಯಾವು ಕೋಲೇ || ೧೭ ||

ಇಂದೀಗಾ ಬಳ್ಳಿ ಹರಿಯಾವು ಹುಸಿಯಾವು
ಇಂದೀಗಾ ಮರನಾ ಬಿಡಲಾರೆ ಕೋಲೇ || ೧೮ ||

ಮಲವಯ್ಯ ಮಲಗೂವ ಮಂಚಾದ ಕೋಲಿಗೆ
ಜಂತಾದವೆಂಬೂ ಬೊಂಬೇಗಳು ಕೋಲೇ || ೧೯ ||

ಜಂತಾದವೆಂಬೂ ಬೊಂಬೇಗಳು ಮಂಚಕ್ಕೆ
ಇಂದಿಗಾ ಮರನಾ ಬಿಡಲಾರೆ ಕೋಲೇ || ೨೦ ||

ಕೋಲಣ್ಣ ಗಂಗೀಗೂ ಕೋಲಣ್ಣ ಗೌರಿಗೂ
ಕೋಲು ಕೋಲೇನಾ ಕೋಲೆನ್ನ ಕೋಲೇ || ೨೧ ||

ಕಾಲೂ ಬಾಲಾ ಚಂದಾ ಮೇಲೇ ಹೆಗಲೂ ಚಂದಾ
ಬಾಲದಲ್ಲೀ ಚಂದಾ ಬಸುವಯ್ಯಾ ಕೋಲೇ || ೨೨ ||

ಬಾಲದಲ್ಲಿ ಚಂದಾ ಬಸವಯ್ಯಾನಾ ಪಾದಕ್ಕೆ
ಹಣ್ಣುವೀಳ್ಯಾ ಇಟ್ಟು ಶರಣೆಂಬೆ ಕೋಲೇ || ೨೩ ||

ಹಣ್ಣುವೀಳ್ಯಾ ಇಟ್ಟು ಏನಂದಿ ಶರಣಂಬೇ
ನಾವ ಮಾಡುವಾ ಕಾರ್ಯ ಜೀಯ ಎಂದು ಕೋಲೇ || ೨೪ ||

ಕಾಲು ಬಾಲಾ ಚಂದಾ ಮೇಲೆ ಪಾವ್ಡಾ ಚಂದಾ
ಬಾಲಾದಲ್ಲಿ ಚಂದಾ ಬಸುವಯ್ಯನ ಕೋಲೇ || ೨೫ ||

ಹಾಲಗಾಯೀ ವಡೂದೂ ಬಸವಯ್ಯನ ಪಾದಕ್ಕೆ
ಹಾಲಗಾಯೀ ವಡುದೂ ಶರಣಂಬೆ ಕೋಲೇ || ೨೬ ||

ಹಾಲಗಾಯೀ ವಡುದೂ ಏನಂದಿ ಶರಣಂಬೇ?
ನಾವ ಮಾಡೂವಾ ಕಾಯಕ ಜಂಬುವೆಂದೂ ಕೋಲೇ || ೨೭ ||

ಕಾಲೂ ಬಾಲಾ ಚಂದಾ ಮೇಲೇ ಶೊಂಬೂ ಚಂದಾ
ಬಾಲಾದಲ್ಲಿ ಚಂದಾ ಬಸುವಯ್ನ ಕೋಲೇ || ೨೮ ||

ಬಾಲಾದಲ್ಲಿ ಚಂದಾ ಬಸುವಯ್ನ ಪಾದಕ್ಕೆ
ಮಂಗಲಾರತಿಯಾ ಬೆಳಗಿರೇ ಕೋಲೇ || ೨೯ ||

ಮಂಗಲಾರತಿಯಾ ಬೆಳಗಿರೇ ಬಸುವಯ್ಯಗೇ
ನಾವು ಮಾಡುವಾ ಕಾರ್ಯಾ ಜಯವೆಂದೂ ಕೋಲೇ || ೩೦ ||
*****
ಹೇಳಿದವರು: ಶ್ರೀ ಮಂಜು ಬಡವ ನಾಯ್ಕ, ಹೊನ್ನಾಕುಳಿ, ೨೪/೧೦/೭೨

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...