Home / ಕವನ / ಕವಿತೆ / ಕಂಕಣ

ಕಂಕಣ

ತಿರುಗಿದೆನು ಕರುನಾಡ ವರೆಯಿಡುತ ಪೂರವಕೆ
ಉರುಭಯಂಕರವಾಯ್ತು ನಡುಗಿತೆದೆಯುಡುಗಿ ಬಲ
ಪಡುವಲಿನ ಹೊಡೆತದಲಿ
ವಡಲೊಡೆದು ಬೇರೆನಿಸಿ
|| ಸಡಲಿರಲು ಪ್ರೇಮಬಂಧ ||

ಮರುಗಿದೆನು ಹಂಪೆಯಲಿ ಸೊರಗಿದೆನು ಸುಯಿಲಿಡುತ
ಅರಿಯಿರಿದ ರೂಪಗಳ ತಡವರಿಸಿ ತಬ್ಬಿದೆನು
ಮೃಡನಲ್ಲಿ ಬೇಡಿದೆನು
ಬಿಡುಯೆಂದು ಹಣೆಗಣ್ಣ
|| ಸುಡುಯೆಂದು ಸತ್ಯ ಕುರುಹ ||

ತಾಳಿದಾವೇಶಗಳು ಬಾಳದೆಯೆ ಅಳಿದಿಹುವು
ಬೀಳದಲೆ ತರ್ಪಣದ ಜಲ ಮೊಳೆಯುವುವೆ ಬೀಜ!
ಮೂಜಗದ ಭಂಡಾರ
ಸೋಜಿಗದ ಕರುನಾಡು
|| ಈ ಜಗದ ಚಿತ್ರ ಭಿತ್ತಿ ||

ಚಾಳೀಸೆ ಕಂಗಳಲಿ ಕಾಣಿಸವೆ ! ಕರುಹುಗಳು
ಸಾಲದೀವಿಗೆಯಿಟ್ಟು ತೋರಣವ ಸಿಂಗರಿಸಿ
ಸೋಗೆಗಂಗಳ ಭಾಗ್ಯ
ಬಾಗಿ ಬಳುಕುತ ಬಹಳು
|| ಈಗಲಿದೊ ಹರಕೆ ಫಲಿಸಿ ||

ಎಣಿಸುತಿದೆ ಹೆಜ್ಜೆಗಳ ಮಹಿಷರ ಶಿರವನ್ನು
ಚಿಣಿಚಿಣನೆ ಚಿಗಿದೋಡೆ ಧಾರ್ವಾಡ ಹೃದಯವದು
ಉರ್ವಿಯನು ಮೆಟ್ಟುವೆನು
ಓರ್ವನೆನೆ ದಕ್ಖಿಣನು
|| ಮರ್ಮದಲಿನಾಡು ಕರೆಯೆ ||

ಸೆಣಸಲೆನೆ ಭಾರತಿಗೆ ಕರ್ಣಾಟ ಖಡ್ಗವಿದೆ
ಹಣೆಗಿಡಲು ತಿಲಕಕ್ಕೆ ಕರುನಾಡ ಕತ್ತುರಿಯು
ತನ್ನಿರವ ನೋಡಲಿಕೆ ಕನ್ನಡದ ಕನ್ನ ಡಿಯು
|| ಇನ್ನುಂಟೆ ತಾಯ್ಗೆ ಕೊರತೆ ||

ಶರಧಿಗಳ ಸಂತವಿಸಿ ಹರಿದ ಕಾವ್ಯಗಳೆಲ್ಲಿ
ಚಿರದಿನಕೆ ಬೆಳಕೀವ ಲಾವಣ್ಯ ರೂಹೆಲ್ಲಿ
ಯಾವಲ್ಲಿ ಅಡಗಿಹವು
ಯಾವಗಿರಿ ಗುಹೆಯಲ್ಲಿ
|| ಭಾವನೆಗೆ ನಿಲುಕದಂತೆ ||

ಕರುನಾಡ ನಡುವಲಿದೆ, ಹೇಮಗಿರಿ ಅಡರದನು
ಹಿರಿಯರೆಮಗಿಟ್ಟಿರುವ ಭಂಡಾರ ನಿಲುಕುವುದು
ಕಂಡವನು ಕೆಳಗಿಳಿದು
ಮಂಡಲಕೆ ಬಿತ್ತಿದರೆ.
|| ಮಂಡಿಗೆಯ ಭೂಮ ಮಹಿಗೆ ||

ಪಾಳೆಯಗಳಲ್ಲಲ್ಲಿ ಅಲೆಯಿಟ್ಟ ನಾಡಲ್ಲಿ
ಏಳಿಗೆಯ ಕಂಪಿಲ್ಲ ಬೆಳವಿಗೆಯ ಸೊಂಪಿಲ್ಲ
ತಿಳಿವಿನಾ ಶಾಂತಿಯಲಿ
ಕೊಳೆಯುವುದು ದಿವ್ಯಛವಿ
|| ಇಳೆಯೆಲ್ಲ ಮೇಳೈಸಲು ||

ಏಳಿರೇಳೇಳಿರಿ ಬೇಲೂರ ಪುತ್ಥಳಿಯ
ಪೌಳಿಯನು ಹಂಪೆಯಲಿ, ತೊಳೆದಿಟ್ಟು ಎಲ್ಲೋರ
ತಿದ್ದಿಟ್ಟು ತಿಳಿರಂಗ
ಹೊತ್ತಿಟ್ಟು ಗೋದೆಯಲಿ
|| ಸುತ್ತಿಸುವ ತೆಪ್ಪೋತ್ಸವ ||

ಕೊಂಕಣರ ಶ್ರೀಧಾಟಿ ಪಡುವಣರ ಪದ ಸರಣಿ
ತೆಂಕಣರ ನಯನೀತಿ ನಡುವಣರ ಜೀವಕಳೆ
ಬೆಳೆಯಲಿದು ಕರುನಾಡು
ಬೆಳೆಸಿಡುವ ಗುಟ್ಟಿದುವೆ
|| ತಿಳಿದವರು ಕಂಡತೆರನು ||

ಬಹುದಿನದ ಕಾಂತಿಯಿದೆ ಶ್ರೀ ಕೃಷ್ಣ ರೂಪದಲಿ
ವಹಿಸಿರಿದ ಹೃದಯದಲಿ ಬೆಳೆವಹಿಯ ಸಜ್ಜೆಯಲಿ
ಬಾಳುವಿರಿ ಬಲು ದಿನದ
ಏಳಿಗೆಯ ಸೊಡರುರಿದು
|| ಕೇಳಿರಿದು ಬೆಳೆವ ಗುಟ್ಟು ||

ಮುಂದಿನಾ ಮಧು ಯುಗವು ಮೊಗ್ಗಿನೊಳಗಡಗಿಹುದು
ಮುಂದದನು ಆಳುವರು ನಿಮ್ಮೊಳಗೆ ಜನಿಸುವರು
ಬೊಮ್ಮ ವರ್ತನೆಯಲ್ಲಿ
ಮುಮ್ಮೊದಲು ಬೆಳೆದಿಹರು
|| ನಿಮ್ಮವರು ಹಿರಿಯರೆಲ್ಲ ||

ಒಂದಾಗಿರೊಂದಾಗಿ ಕಂಕಣದ ಬಂಧದಲಿ
ಒಂದಾಗಿ ಮುಂದಿರುತ ವಿಶ್ವಕರ್ಣಾಟಕ
ವಿಶ್ವಾಸದಾರತಿಯ
ವಿಶ್ವಕೆನಲೆತ್ತಲಿದು
||ಶ್ರೀ ವಿಶ್ವಕರ್ಣಾಟಕ ||
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...