Home / ಕವನ / ಕವಿತೆ / ಸ್ನೇಹ ಸಂಗಮ

ಸ್ನೇಹ ಸಂಗಮ

ಗೆಳೆಯ :- ಬಿಡು ಚಿಂತೆ ಬಿಡು ಚಿಂತೆ ನನ್ನ ಗೆಳತಿ
ಕೊರಗಿ ಕೊರಗಿ ಮರುಗುವೆ ಏಕೆ?
ಹಸಿರ ನೆಲದಾಗ ನೇಸರ ಬಾಳಿನಗಲ
ಜೀವ ಜೀವಕೆ ಬೇಸರ ಏಕೆ?
ನೀ ಯಾಕೆ ಹಿಂಗ್ಯಾಕೆ?

ಗೆಳತಿ :- ಹಸಿರ ನೆಲದಾಗ ವಸುಮತಿಯ ಕೂಡಿ
ನೇಸರ ಬಾಳಿನಗಲ ಪ್ರಕೃತಿ
ನನ್ನೆಲ್ಲ ಅಂಗಾಂಗಗಳು ಜೀವಜೀವಕೆ
ಚೈತನ್ಯ ನೀಡ್ಯಾವೋ ||
ಬೀಸುವ ಕೊಡಲಿಗೆ ಬೆಚ್ಚಿ ಬಿದ್ದಾಗ ನನ್ನ ಅಕ್ಕಾ…
ಬೆದರಿ, ಬೆದರಿ, ಹೆಪ್ಪಾಯ್ತೊ ರಕುತ!…

ಗೆಳೆಯ :- ನೀ ಅಳುವೆ ಏಕೆ ಗೆಳತಿ
ಕಾಣ್ವಾರು ಬಲ್ಲವರೂ ಕೇಳೇ
ದಯೆ, ಕ್ಷಮಾ ಕರುಣೆಯಿಂದಲಿ
ಕಾಯ್ವರೂ ಇಹರು ಬೇಸರವೇತಕೆ
ಬಿಡು ಚಿಂತೆ…

ಗೆಳತಿ :- ದಯೆ, ಅರ್ಥ ಬಲ್ಲವರೂ ಎಂತಿಹರು
ಇದ್ದು ಇಲ್ಲದ ಸಿರಿವಂತರೂ
ಅರೆ ಹೊಟ್ಟೆ ಕೂಗು ಕೇಳದವರು
ನೆಲಮನೆ ಗುಡಿಸಲು ಕಳೆಕಟ್ಟಿ
ಬೆಳೆಸಿದವರು

ಗೆಳೆಯ :- ಭಾವ ಬಾಗಿನಾ ವಿಧಿಯ ನಿಯಮ
ಅರೆಹೊಟ್ಟೆ ಸಿರಿಯು ಸಿರಿತನ
ಬಿಗುಮಾನ ಬಿಡು, ಮೂರೇ ದಿನದ ಸಂತೆ
ಹಾಡ್ಯಾರು ಮಾಲಿಕರು
ಅವರವರ ಜೀವನ ಅವರದೇ ಗೆಳತಿ ||

ಗೆಳತಿ – ಸಾರ್‍ಯಾರೋ ಜೀವನ
ಸಂತೆಯೊಳಗಿನ ಮಾಳಗಿ ತಿಳಿವುದೇ
ನಮ್ಮತನ ಹರಿ ಬಿಟ್ಟರೆ
ಉಳಿವುದೇನೋ ಹಿರಿತನ
ಬೆಳೆವುದೇ ಕುಲತನ
ಕೊಡಲಿ ಪೆಟ್ಟು ರೆಟ್ಟೆ
ಹಿಗ್ಗಿತೇನೋ ಗೆಳೆಯಾ… ||

ಗೆಳೆಯ :- ಹಿರಿತನ ಕುಲತನ ಅವರಲ್ಲಿ ಬೆಳೆವುದೇ
ಹಸಿರಾ ಭೂದೇವಿ ಜತನಕೆ
ಉಸಿರಾ ಕಟ್ಟಿದರೆ ಗೆಳತಿ
ಕೊಡಲಿ ಹಿಗ್ಗಿತೇನೇ
ಇರುವರು ಜಾಣರು ಕೇಳೇ ಸಖಿ ||

ಗೆಳತಿ :- ಹೂವು ಮುಡಿಪು ದೇವಗೆ ಹೊನ್ನ ಕಳಶಕೆ
ಮುಡಿಪು ನೀರೆಯರ ಬಾಳ ಚಂದನಕೆ
ಸಿಂಗಾರ ವನಕೆ ಸಿಂಗಾರ ಮನಕೆ ಜಗಕೆಲ್ಲಾ
ನರನಾಡಿ ಬಂಗಾರ ನಿಲುವಿಗೆ ತಿಳಿವರೇನೋ ಎನ್ನ ಗೆಳಯಾ ||

ಗೆಳೆಯ :- ತಿಳಿ ನೀನು ಗೆಳತಿ, ತಿಳಿವರು ಗೆಳೆಯರು
ಪ್ರೀತಿಯ ಭಾವನೆಗೆ ಸಿಕ್ಕಿದವರು
ಕಥೆಗಳ ಸುರುಳಿ ಹೊಯ್ದವರು
ಗೋಧೂಳಿ ಲಗ್ನವಾದವರು, ಅವರೇ ನಮ್ಮವರು
ಹಿರಿಯರು ಕಿರಿಯರು ನಾವಾದವರೂ
ಅಕ್ಷತೆ ಮಂತ್ರ ಬೆಳ್ ಮುಗಿಲ ಚಪ್ಪರ
ಗಿಣಿ ಕೋಗಿಲೆ ಮನಸಾರೆ ಹರಸಿದವರು
ತಿಳಿವರು ಗೆಳೆಯ ಗೆಳತಿಯರು ||
ಅವರೇ ನಮ್ಮವರು ಅಜ್ಜ ಅಜ್ಜಿಯಾದವರು
ಬಿಡು ಚಿಂತೆ ಬಿಡು ಚಿಂತೆ ನನ್ನ ಗೆಳತಿ

ಗೆಳತಿ :- ಹೊಕ್ಕಳೈಶ್ವರ್ಯ, ಪ್ರೀತಿಯು ಮಾನ್ಯ
ಪಡಬಾರದ ಕಷ್ಟಪಟ್ಟೆನೋ ಗೆಳೆಯಾ
ಯಾರಿದ್ದರೇನು ಯಾರಾದರೇನು!
ನಮ್ಮವರಿಲ್ಲದ ಮೇಲೆ ಅಕ್ಕತಂಗೀರು,
ತಂದೆ ತಾಯಿಯರು, ಬಂಧು ಬಳಗ,
ಅಜ್ಜ ಅಜ್ಜಿಯರು, ಬೇರು ಬಿಟ್ಟ ಗೆಳೆಯರು,
ಭೂಮಿ ಒಳಗಿನ ಚಿಗುರೊಡೆದವರು ||

ಬಿಟ್ಟಾರು ಬಿಡುದವರು ನನ್ನ
ರೆಂಬೆ ಕೊಂಬೆ ಕೊಚ್ಚಿ ಹಾಕಿದವರು
ನಿಲ್ಲಲಾರೆ, ಬದುಕು, ಇನ್ನೇಕೆ ದುಃಖದ
ಮಡುವು ಇನ್ನೇಕೇ ಗೆಳೆಯಾ ||…

ಗೆಳೆಯ :- ನಿರಾಭರಣ ಸುಂದರಿ, ಬಲ್ಲೇನು ನಿನ್ನ ಆತ್ಮ
ನಿನ್ನತನದ ಸೋಗು ಬಲ್ಲೇ ಕಾಣೆ
ನಿನ್ನಲೊಂದಾಗಿ ನಾನಿಲ್ಲವೇನೆ
ಬರುವರು ಮತ್ತೆ ನಮ್ಮೆಡೆಗೆ
ದಿಟ್ಟತನದಾ ಹೆಜ್ಜೆ ಹಾಕಿದವರು
ಶ್ರೀ ರಕ್ಷೆ ಹಸ್ತ ನೀಡುವವರು
ನಾಳೆಗಾಗಿ ಬೆಂಗಾವಲಾಗಿ
ನಾಡಿಗಾಗಿ ದುಡಿದು ಹೆಸರಾದವರು
ಬಿಡು ಚಿಂತೆ ಬಿಡು ಚಿಂತೆ ನನ್ನ ಗೆಳತಿ ||

ಗೆಳತಿ :- ದಿಟ್ಟತನದ ಹೆಜ್ಜೆ ಹಾಕಲಿ
ಶ್ರೀ ರಕ್ಷೆ ಹಸ್ತ ನೀಡಲಿ
ಉಳಿದೆವು ನಾವು ಕುಲಜರು
ಉಳಿವು ಎಂತು ಬಲ್ಲವ ಬಲ್ಲವರು
ಒಲ್ಲೆ ಎನ್ನಲಾರೆ ಬಾಳಿದು ಸಂಚಾರ
ನಿನ್ನ ನುಡಿಯ ನನಗಾಧಾರ
ನೀನಿಲ್ಲದೆ ನಾನೆಂದು ಬಾಳೆನೋ
ನೀನೇ ಎನ್ನ ಪುರುಷ ಕಣೋ
ಪ್ರಕೃತಿ ನಾನಾಗಿ ಉಳಿದೆನೋ ಗೆಳೆಯಾ
ನಿನ್ನಲ್ಲಿ ನಾನಾಗಿ ಉಳಿವೆನು ||

ಗೆಳೆಯ :- ನಿನ್ನತನಕೆ ನಾನಾಗಿ ಬರುವೆನು ಗೆಳತಿ
ಉಸಿರಲ್ಲಿ ನಾವು ಹಸಿರಾಗಿ
ನಾವೇ ನಾವು…
ಪರಿಸರ ಮಕ್ಕಳ ನೇಸರ
ತಿಳಿ ನೀ ಗೆಳತಿ
ಕಲಿವರು ಅವರೇ ಅವರು
ಕಾಣುವುದು ದಿಟ ಸಂತೋಷ ಬಾಳಲಿ
ಭೂಮಿ ತಾಯ ಒಡಲ ಕುಡಿಗಳು ನಾವು ||

“ಕಿಲಕಿಲನೆ ಒಮ್ಮೆ ನಸು ನಕ್ಕಳು ಗೆಳತಿ
ಗೆಳೆಯಾ ಅವಳಲ್ಲಿ ಬೆರೆತ,
ಸ್ನೇಹ ಸಂಗಮವಾಯ್ತು ||
ಧರಣಿ ಅತ್ತೆಯಾದಳು
ಸೊಸೆಗೆ ಮುತ್ತಿನಾರತಿ ಎತ್ತಿ ಬರಮಾಡಿಕೊಂಡಳು.”
“ಚೈತ್ರ ಮಾಸ ಬಂದಾಯ್ತು
ಮರ ಚಿಗುರಿ ಹಸಿರು ನಿಂದಾಯ್ತು
ಕಣ್ಣಿಗೆ ಹಬ್ಬ ತಂದಾಯ್ತು”ಽಽಽಽ

ಹಾದಿಯಲಿ ಹೂವ ಹಾಸ್ಯಾರೋ
ಬಣ್ಣ ಬಣ್ಣದಾ ಉಡಿಗೆ ತೊಟ್ಟವರು
ನಮ್ಮ ಕುಲಜರು ||
ಎಲ್ಲೆಲ್ಲೂ ಸಂಭ್ರಮ ಹೂರಣ
ಸಿರಿತನ ಹಿರಿತನ ಪಡೆದವರು
ಕಿವಿಗೆ ಇಂಪು, ಮನಕೆ ತಂಪು
ಕಂಪಿಗೆ ಸ್ಫೂರ್ತಿಯಾದವರು
ಇವರು ನಮ್ಮವರು
ಇವರೇ ಇವರು ನಮ್ಮವರು, ನಮ್ಮವರು ||
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...