Home / ಲೇಖನ / ಇತರೆ / ಮುಪ್ಪು

ಮುಪ್ಪು

ಬದುಕೊಂದು ರೋಚಕ ನಾಟಕ, ಮುಪ್ಪು ಅದರ ಕೊನೆಯ ಅಂಕ. ಬಾಲ್ಯ, ಯೌವನ, ಮುಪ್ಪು ಜೀವನದ ಮೂರು ಮುಖ್ಯ ಹಂತಗಳು. ಪ್ರತೀ ಹಂತಗಳೂ ಜೀವನವೆನ್ನುವ ನಾಟಕದ ಪುಟಗಳಲ್ಲಿ ನವರಸಗಳನ್ನು ತುಂಬುತ್ತವೆ. ಬಾಲ್ಯ ಹೆತ್ತವರಿಗೆ ಸೇರಿದ್ದು, ಯೌವನವೂ ನಮ್ಮ ಕೈಯಲ್ಲಿಲ್ಲ. ಅದು ಉದ್ಯೋಗಕ್ಕೆ, ಹೆಂಡತಿಗೆ, ಮಕ್ಕಳಿಗೆ ಸೇರಿದ್ದು, ಮುಪ್ಪು ಮಾತ್ರ ನಮಗೇ ಸೇರಿದ್ದು. ನಮ್ಮದೇ ಆಗುವ ಈ ಕೊನೆಯ ಅಧ್ಯಾಯವನ್ನು ಬರೆಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಿದವರು ಭಾಗ್ಯಶಾಲಿಗಳು.

ಮುಪ್ಪು ಜೀವನದ ಒಂದು ಮಹತ್ತರ ಘಟ್ಟ. ಒಂದು ಪ್ರಬುದ್ಧ ಹಂತವೂ ಹೌದು. ಈ ಹಂತದಲ್ಲಿ ನಮ್ಮನ್ನು ನಾವು ಕಂಡುಕೊಳ್ಳಲು ಬಹಳ ದೊಡ್ಡ ಅವಕಾಶವಿದೆ. ಜೀವನದುದ್ದಕ್ಕೂ ಎಷ್ಟೋ ಕೆಲಸಗಳನ್ನು ಮಾಡಬೇಕೆನ್ನುವ ತುಡಿತಗಳಿದ್ದರೂ ಸಂಸಾರ ಹಾಗೂ ವೃತ್ತಿಜೀವನದ ಒತ್ತಡಗಳು ಎಲ್ಲಾ ಸಮಯವನ್ನು ಕಿತ್ತುಕೊಳ್ಳುತ್ತಿರುವಾಗ ನಮಗೆ ಪ್ರಿಯವಾದ ಕೆಲಸಗಳು, ಹವ್ಯಾಸಗಳು ಪ್ರಾಮುಖ್ಯತೆ ಕಳಕೊಂಡು ಮನದಾಳಕ್ಕೆ ನೂಕಲ್ಪಟ್ಟು ಅವು ಅಲ್ಲಿ ಗೂಡುಕಟ್ಟುತ್ತವೆ. ಹಲವಾರು ಜವಾಬ್ದಾರಿಗಳ ನಿರ್‍ವಹಣೆಯಲ್ಲಿ ಸ್ವಂತಕ್ಕೆ ಸಮಯ ಸಿಗುವುದೇ ಕಡಿಮೆ. ಆದರೆ ನಿವೃತ್ತರಾಗಿ ಮನೆಯಲ್ಲಿ ಕುಳಿತಾಗ ಸಮಯವೆಲ್ಲ ನಮ್ಮದೇ. ಮಾಡಲಾಗದ ಕೆಲಸಗಳನ್ನು ಮಾಡಲು, ಮರೆತು ಹೋಗಿರುವ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಇದು ಸಮರ್‍ಪಕವಾದ ಸಮಯ. ಈ ಅವಕಾಶವನ್ನು ಉಪಯೋಗಿಸಿಕೊಂಡು ಬೇಕಾದುದನ್ನು ಮಾಡಿಕೊಂಡು ಮಕ್ಕಳು ದೂರದಲ್ಲಿರುವ ನೋವನ್ನು ಮರೆತು ಜೀವನದಲ್ಲಿ ಸ್ವಲ್ಪ ರಂಗು ತುಂಬಿಕೊಂಡು ಜೀವಿಸುವುದರಲ್ಲಿ ಇಡೀ ಜೀವನದ ಸಫಲತೆ ಇದೆ.

ಮನಸ್ಸಿಗೆ ಮುಪ್ಪು ತಾಗದಿದ್ದರೂ ದೇಹಕ್ಕೆ ಮುಪ್ಪು ಬಂದೇ ಬರುತ್ತದೆ. ಪ್ರಾಯಕ್ಕೆ ತಕ್ಕಂತೆ ಒಂದೊಂದೇ ಖಾಯಿಲೆಗಳು ಕಾಡಿಸಿ ಮುಪ್ಪನ್ನು ಸಾಬೀತು ಪಡಿಸುತ್ತಿರುವಾಗ ಮುಪ್ಪನ್ನು ಮರೆಯುವುದು ಸಾಧ್ಯವಿಲ್ಲ. ಮುಪ್ಪುನ್ನು ಅದರ ಜೊತೆಯಲ್ಲಿ ಬರುವ ಖಾಯಿಲೆಗಳನ್ನು, ಅನಾನುಕೂಲತೆಗಳನ್ನು ಸ್ವಾಭಾವಿಕ ಎನ್ನುವ ಮನೋಭಾವದಿಂದ ಸ್ವೀಕರಿಸಿ ತೃಪ್ತರಾಗಿ ಜೀವಿಸಿದರೆ ಮುಪ್ಪು ಯಾವತ್ತೂ ಶಾಪವಾಗಲಾರದು. ಕಳೆದು ಹೋಗುತ್ತಿರುವ ದೈಹಿಕ ಶಕ್ತಿಗಾಗಿ ಮರುಗದೆ ಮನಸ್ಸಿನ ಹುಮ್ಮಸ್ಸನ್ನು ಕಾಪಾಡಿಕೊಂಡು ನಗುನಗುತ್ತಾ ಬಾಳುವುದನ್ನು ಸಾಧ್ಯ ಮಾಡಿಕೊಂಡರೆ ಮುಪ್ಪು ಕಷ್ಟವೆನಿಸುವುದಿಲ್ಲ. ಮುಪ್ಪಿನೊಡನೆ ನಗುನಗುತ್ತಾ ಜೀವಿಸಲು ಕಲಿಯುವುದರಲ್ಲಿ ಜೀವನದ ನೆಮ್ಮದಿ ಇದೆ.

ಮುಪ್ಪಿನ ಕಾಲದಲ್ಲಿ ಮುಖ್ಯವಾಗಿ ಬೇಕಾಗಿರುವುದು ಸಮಾಧಾನ ಹಾಗೂ ನೆಮ್ಮದಿ. ಚಿಗುರು, ಹೂ, ಕಾಯಿ, ಹಣ್ಣು, ನೆರಳು ಎಲ್ಲವನ್ನೂ ಸ್ವಲ್ಪವೂ ಬೇಸರಿಸದೆ ಕೊಟ್ಟು ಮುಪ್ಪಾದ ಮರ ಎಂದಾದರೂ ಧರೆಗುರುಳದಿದ್ದೀತೇ? ಅದು ಜೀವನದ ಸತ್ಯ.

ಜೀವನದಲ್ಲಿ ಎದುರಾಗುವ ಎಲ್ಲ ಸಿಹಿಕಹಿಗಳನ್ನು ಸಮಾನ ಮಾನಸಿಕ ನೆಲೆಯಿಂದ ಎದುರಿಸಿ ಎಲ್ಲಿಯೂ ನೆಮ್ಮದಿಗೆ ಧಕ್ಕೆ ಬಾರದಂತೆ ಸಮರ್‍ಪಕವಾಗಿ ಬಾಳುವುದು ಒಂದು ಕಲೆ ಹಾಗೂ ದೊಡ್ಡ ಸಾಧನೆ. ಇಪ್ಪತ್ತರಲ್ಲಿ ಐವತ್ತರ ಬುದ್ಧಿವಂತಿಕೆ, ಮೂವತ್ತರಲ್ಲಿ ಎಪ್ಪತ್ತರ, ವಿವೇಚನೆ, ಎಪ್ಪತ್ತರಲ್ಲಿ ಇಪ್ಪತ್ತರ ಹುಮ್ಮಸ್ಸು ಮೈಗೂಡಿಸಿಕೊಂಡಾಗ ಈ ಕಲೆಗಾರಿಕೆ ಯನ್ನು ಜೀವನದುದ್ದಕ್ಕೂ ತೋರಿಸಬಹುದು. ಮುಪ್ಪಿನ ಜತೆಗೆ ಬದುಕಲು ಕಲಿತಾಗ ಜೀವನವೆನ್ನುವ ಸುಂದರ ನಾಟಕದ ಅಥವಾ ಸ್ವಾರಸ್ಯಕರ ಕಾದಂಬರಿಯ ಕೊನೆಯ ಸಾಲುಗಳನ್ನು ತುಂಬಾ ಮೌಲಿಕವಾಗಿ, ಇಡೀ ಕೃತಿಗೆ ಮೆರುಗು ಕೊಡುವ ಹಾಗೆ ಬರೆಯುವುದು ಸಾಧ್ಯವಾಗದೇ?

ಮುಪ್ಪಿನಲ್ಲಿ ಪರಿಪಕ್ವವಾಗಿ ಜೀವಿಸುವುದು ಕೂಡಾ ಒಂದು ಸುಯೋಗ. ಒಂದು ಹಣ್ಣಿನ ಪರಿಪಕ್ವತೆಯ ಸಿಹಿ, ಒಳ್ಳೆಯ ಕಾವ್ಯದ ಸ್ವಾರಸ್ಯವಾದ ಕೊನೆಯ ಸಾಲುಗಳು, ದೀಪ ನಂದುವ ಮೊದಲಿನ ಪ್ರಖರ ಬೆಳಕು, ಸೂರ್‍ಯ ಮುಳುಗುವ ಮೊದಲಿನ ರಂಗು, ಪೂರ್‍ಣ ಚಂದಿರನ ತಂಪಾದ ಬೆಳಕು ಎಲ್ಲವೂ ಜೀವನದ ಕೊನೆಯ ಹಂತದಲ್ಲಿ ಇರುವಂತೆ ನೋಡಿಕೊಂಡರೆ ಮುಪ್ಪಿನ ತೊಡಕುಗಳು, ಸಾವಿನ ಹೆದರಿಕೆ ಯಾವುದೂ ಕಂಗೆಡಿಸಲಾರವು. ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ಸುತ್ತಲಿನ ಪ್ರಪಂಚವನ್ನು ಅದು ಇದ್ದ ಹಾಗೇ ಒಪ್ಪಿಕೊಂಡು ಯಾವ ಕಟ್ಟ ಭಾವನೆಗಳಿಗೂ ಎಡೆಕೊಡದೆ ಆತ್ಮವಿಶ್ವಾಸದಿಂದ ಜೀವನವನ್ನು ಹಾಗೂ ಸುತ್ತಲಿನವರನ್ನು ಪ್ರೀತಿಸುತ್ತ ಜೀವಿಸಲು ಕಲಿತರೆ ಮುಪ್ಪು ಯಾವತ್ತೂ ಒಂದು ಹೊರೆಯಾಗಿ ಕಾಡುವುದಿಲ್ಲ.

ಇಡೀ ಜೀವನದಲ್ಲಿ ಮುಪ್ಪು ಸಂತಸದಿಂದ ಅನುಭವಿಸಬೇಕಾದ ಹಂತ, ಅದನ್ನು ಮನಸಾರೆ ಅನುಭವಿಸುವುದೆಷ್ಟು ಚಂದ!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...