Home / ಕವನ / ಅನುವಾದ / ಮುದ್ದಿನ ಕುರಿಮರಿ

ಮುದ್ದಿನ ಕುರಿಮರಿ

ಹಿಡಿದು ಮಂಜು ಬೀಳುತಿತ್ತು, ಚುಕ್ಕಿ ಕಣ್ಣು ಮಿಟುಕುತಿತ್ತು;
“ಕುಡಿಯೊ, ಕಂದ, ಕುಡಿಯೊ” ಎಂದು ನುಡಿವ ಮಾತು ಕಿವಿಗೆ ಬಿತ್ತು;
ತಿರುಗಿ ನೋಡಲೊಬ್ಬೆಯಾಚೆ, ಒಬ್ಬಳಲ್ಲಿ ಹೆಣ್ಣು ಮಗಳು
ನೊರೆಯ ಬಿಳುಪು ಕುರಿಯ ಮರಿಯ ತಲೆಯ ತಡವುತಿದ್ದಳು.

ಕುರಿಗಳಿಲ್ಲ ಬೇರೆ ನೆರೆಯೊಳಲ್ಲಿ ಮರಿಯದೊಂದೆ ಇತ್ತು;
ಕೊರಳಿಗೊಂದು ಸಣ್ಣ ಹುರಿಯ ಬಿಗಿದು ಕಲ್ಗೆ ಕಟ್ಟಿ ಇತ್ತು;
ಪುಟ್ಟ ಹುಡುಗಿ ದಟ್ಟವಾದ ಹುಲ್ಲ ಮೇಲೆ ಮಂಡಿಯೂರಿ,
ಬೆಟ್ಟದಿಂದ ಬಂದ ಮರಿಗೆ ತಿಂಡಿಯಿಡುತಲಿದ್ದಳು.

ಕಿವಿಯನಲುಗಿ, ತಲೆಯನೊಲೆದು, ಬಾಲವನ್ನು ಕುಣಿಸಿ, ನಲಿದು,
ಅವಳ ಕಯ್ಯ ತಿಂಡಿಯನ್ನು ಮುದ್ದಿನಿಂದ ಸವಿವ ಮರಿಗೆ
“ಕುಡಿಯೊ, ಕಂದ, ಕುಡಿಯೊ” ಎಂದು ನುಡಿವ ದನಿಯ ಕೇಳಿದೊಡನೆ,
ಅವಳ ಹೃದಯವೆನ್ನ ಹೃದಯದಲ್ಲಿ ಕಲೆತುಹೋಯಿತು.

ಕಣ್ಣಿಗಂದವಾದ ಮಗುವೊ, ಮುದ್ದುಗಾರನಾದ ಮರಿಯೊ,
ಕಣ್ಣು ನೆಟ್ಟು ನೋಡುತಿದ್ದೆನೊಲುಮೆಯಿಂದ ಜೋಡಿ ಚೆಲುವ;
ಕುಡಿಸಿ ಮುಗಿಸಿ ಮರಿಯ ಬಿಟ್ಟು ಹುಡುಗಿ ಮನೆಗೆ ಹೊರಟಳಾಗ,
ನಡೆಯಲಿಲ್ಲ ಹತ್ತು ಹೆಜ್ಜೆ, ಹಾಗೆ ನಿಂತುಕೊಂಡಳು.

ತಿರುಗಿ ಮರಿಯನಕ್ಕರಿಂದ ನೋಡುವವಳ ಮೊಗದ ಬಗೆಯ
ಮರೆಯಲಿದ್ದ ಜಾಗದಿಂದ ಕಂಡೆನವಳು ಕಾಣದಂತೆ;
ಅಳತೆ ಮಾಡಿ ನುಡಿಯ ಹೆಣೆವ ವರವ ಕೊಡಲು ವಾಣಿ ಈಗ
ಎಳೆಯಮರಿಗೆ ಹೀಗೆ ಹಾಡದಿರಳೆ ಎಂದುಕೊಂಡೆನು.

“ಕೊರತೆಯೇನು ಕಂದ ನಿನಗೆ? ಹುರಿಯನೇಕೆ ತುಯ್ಯುತಿರುವೆ?
ಮರೆಯದುಣಲು ಮಲಗಲೆಲ್ಲ ನೇರ್ಪುಮಾಡಿ ಇರುವೆನಲ್ಲ!
ನೆಲದ ಹುಲ್ಲು ಮೆತ್ತೆಯಲ್ಲ! ಇದಕೆ ಹಸುರೆ ಇಲ್ಲವಲ್ಲ!
ಮಲಗು, ಮರಿಯೆ, ಮಲಗು, ಕಂದ; ನಿನಗೆ ಕೊರತೆಯಾವುದು?

ಏನು ನೀನು ಹುಡುಕುತಿಹುದು? ಮನಸಿಗೇನು ಬಯಕೆ ಇಹುದು?
ನೀನು ಬಲಿತು ಬೆಳೆಯುತಿರುವೆ; ಸೊಬಗು ಹೊಮ್ಮಿ ಹೊಳೆಯುತಿರುವೆ,
ಇಲ್ಲಿ ಗರುಕೆ ಎಳೆಯ ಗರುಕೆ, ಇಲ್ಲಿ ಹೂವಿಗೆಣೆಯ ಕಾಣೆ.
ಅಲ್ಲಿ ಹಸುರು ಪಯಿರು ಬೀಸಿ, ಬಿಡದೆ ಕಿವಿಯೊಳುಲಿವುದು.

ಬಿಸಿಲು ಕಾದು ಹೊಳೆವ ಹೊತ್ತು, ನಾರುಹುರಿಯನಿತ್ತ ನೀಡು,
ಬಸಿರಿಮರದ ನೆರಳ ಸೇರಿ ತಂಪುಮಾಡಿಕೊಳ್ಳಬಹುದು,
ಗಿರಿಯ ಬಿರುಸು ಗಾಳಿಮಳೆಗೆ ಹೆದರಿಕೊಂಡು ನಡುಗಲೇಕೆ?
ಗಿರಿಯ ಗಾಳಿಮಳೆಗಳಿಲ್ಲಿ ಕನಸಿನಲ್ಲಿ ಸುಳಿಯುವು.

ಮಲಗು, ಮುದ್ದು ಮರಿಯೆ, ಮಲಗು; ಮರೆತೆಯೇನು ನಿನ್ನ ಪಾಡ?
ಮಲೆಯ ದೂರದಿರುಬಿನಲ್ಲಿ ಅಪ್ಪ ನಿನ್ನ ಕಂಡ ದೆಸೆಯೆ?
ಹಲವು ಮಂದೆ ಮೇದುವಲ್ಲಿ, ನಿನಗೆ ನೀನೆ ಎನುವರಿಲ್ಲ,
ಕೆಲದೊಳಿರದೆ ನಿನ್ನ ತಾಯಿ ಬಿಟ್ಟು ನಡೆದಳೆಲ್ಲಿಯೋ.

ತೋಳಿನಲ್ಲಿ ಎತ್ತಿಕೊಂಡ, ಮರುಕದಿಂದ ಮನೆಗೆ ತಂದ,
ಹೇಳು, ಬಂದ ಭಾಗ್ಯವುಳಿದು, ಎಲ್ಲಿ ಅಲೆಯುವಾಸೆ ಕಂದ?
ಸಾಕುತಿಹೆನು ತಾಯಿಯಂತೆ – ಈದ ತಾಯಿ ಬೆಟ್ಟದಲ್ಲಿ
ಸಾಕಿ ಸಲಹುತಿದ್ದಳೇನು, ಇಷ್ಟು ಪ್ರೀತಿತೋರುತ?

ಎರಡುಸಾರಿ, ಹಗಲು ಹೊತ್ತು, ನನ್ನ ಪುಟ್ಟ ತೊಟ್ಟಿಯಲ್ಲಿ,
ತೊರೆಯ ತಿಳಿಯ ನೀರ ತಂದು, ನೀನೆ ಬಲ್ಲೆ, ಕುಡಿಸುತಿರುವೆ;
ಎರಡುಸಾರಿ, ಮಂಜು ಬಿದ್ದು, ಹೊಲಗಳೆಲ್ಲ ನೆನೆದ ವೇಳೆ,
ಕರೆದು ಬಿಸಿಯ ನೊರೆಯ ಹಾಲ, ಹೊಸದ ತಂದು ಹೊಯ್ಯುವೆ.

ಬೇಗ ಮಯ್ಯಿ ತುಂಬಿಕೊಂಡು, ಕಾಲು ಬಲಿತು ನೆಗೆಯ ಬಲ್ಲೆ,
ಆಗ ನನ್ನ ಪುಟ್ಟ ಬಂಡಿ ಕಟ್ಟಿಕೊಡುವೆ, ಎಳೆಯುವಂತೆ.
ನನ್ನ ಜೊತೆಯೊಳಾಟವಾಡಿ, ಚಳಿಯ ಗಾಳಿ ಕೊರೆಯುವಾಗ,
ನನ್ನ ಬಳಿಯೆ ರೊಪ್ಪವಾಗಿ, ಕೆಡೆಯುವಂತೆ ಬೆಚ್ಚಗೆ.

ಮಲಗ ಒಲ್ಲದೊಲ್ಲದೇಕೊ, ಪ್ರಾಣಿ, ಪಾಪ! ಮನಸಿನೊಳಗೆ
ಸುಳಿದು ಬಂದ ತಾಯ ನೆನಹು ತೊಳಲುತಿಹುದೊ ಏನೋ ಅರಿಯೆ;
ನನಗೆ ತಿಳಿಯದಂತೆ ನಿನಗೆ ಪ್ರೀತಿಯಾದುದಾವುದಿಹುದೊ,
ಕನಸಿನೊಳಗೆ ಹೊಳೆದದಾವ ನೋಟ ಪಾಟ ಸೆಳೆವುದೋ!

ಗಿರಿಯ ನೆತ್ತಿ ಏನು ಹಸುರು, ಏನು ಚೆಲುವುನೋಡಲಯ್ಯೊ!
ಬರುವುವೆಂದು ಕೇಳಿ ಬಲ್ಲೆನಲ್ಲಿ ಬಿರುಸುಗಾಳಿ ಮಬ್ಬು
ಎಳೆಯ ಮಗುವಿನಂತೆ ನಗುತ ನಗುತ ನೆಗೆವ ತೊರೆಗಳಲ್ಲಿ
ಮುಳಿಸು ಬರಲಿ, ಎರೆಗೆ ಹಸಿದ ಸಿಂಹದಂತೆ ಮೊರೆವುವು.

ಎರಗಲಾರದಲ್ಲಿ ಹದ್ದು , ಅದಕೆ ಬೆದರ ಕೆಲಸವಿಲ್ಲ.
ಇರುಳು ಹಗಲು ಭದ್ರವಿಲ್ಲಿ, ಹಟ್ಟಿ ಇಹುದು ಪಕ್ಕದಲ್ಲಿ.
ಅಳುಕಿ ಏಕೆ ಅರಚಿಕೊಳುವೆ? ಹುರಿಯ ತುಯ್ದು ಹಿಂದೆ ಬರುವೆ?
ಮಲಗು, ಕಂದ ಬೆಳಕುಹರಿದ ಗಳಿಗೆ ಬಂದು ಕಾಣುವೆ.

ತಳುಗಿ, ತಳುಗಿ, ಹೆಜ್ಜೆಯಿಟ್ಟು, ಮನೆಯ ಕಡೆಗೆ ನಡೆಯುವಾಗ,
ಹಲವು ಸಾರಿ ಹಾಡನಿದನು ನನಗೆ ನಾನೆ ಹೇಳಿಕೊಂಡೆ;
ಪದವನೆಲ್ಲ ಪಂಕ್ತಿಪಂಕ್ತಿಯಾಗಿ ಮಗುಚಿನೋಡುವಾಗ,
ಪದದೊಳವಳದರ್ಧಮಾತ್ರ, ಅರ್ಧ ನನ್ನದೆನಿಸಿತು.

ತಿರುಗಿ, ತಿರುಗಿ, ಪದವನಿದನು ನನಗೆ ನಾನೆ ಹೇಳಿಕೊಂಡೆ;
ಅರೆಗೆ ಹೆಚ್ಚೆ ಹೆಣ್ಣ ಪಾಲು ಎಂದು ತೋರಿತೇಕೆ ಎನಲು,
ಅವಳ ಕಣ್ಣ ನೋಟದಿಂದ; ಅವಳ ನುಡಿಯ ಮರುಕದಿಂದ,
ಅವಳ ಹೃದಯವೆನ್ನ, ಹೃದಯದಲ್ಲಿ ಕಲೆತುಹೋಯಿತು.
*****
WORDSWORTH : The Pet Lamb

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...