ಕಡಲು ಬೆಟ್ಟಕ್ಕೆ ಹೇಳಿತು:
“ನನ್ನ ತಳ ಮಂದರ,
ನಿನ್ನ ಮುಡಿ ತಾರ,
ನಡುವಿನ ಸ್ವರಸಹಿತ
ನಾನೂ ನೀನೂ ಕೂಡಿ
ಭೂಮಿ
ಏನು ಗಾನಮನೋಹರ!”
ಬೆಟ್ಟ ಕಡಲಿಗೆ ಹೇಳಿತು :
“ಅದಕ್ಕೆಂದೇ ಆಗಸ
ಪ್ರತಿ ರಾತ್ರಿ
ತೊಡಿಸುತ್ತದೆ
ಇಳೆಯ ಕೊರಳಿಗೆ ನಕ್ಷತ್ರಹಾರ :
ಆಗ ಮಂದರದಿಂದ
ತಾರದವರೆಗೆ
ಧಾರಿಣಿಯ ಎದೆ ತುಂಬ
ಕೋಟಿ ಕೋಟಿ ಸ್ವರಸಂಚಾರ;
ಬದುಕಿನಾಚೆಯದನ್ನೂ
ಹಿಡಿಯಲೆಳಸುತ್ತದೆ
ಆಗ
ಮಣ್ಣಿನ ಪಂಜರ.”
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.